ಉಡುಪಿ : ನವರಾತ್ರಿ ಹಬ್ಬದ ಪ್ರಯುಕ್ತ ನಡೆಯಲಿರುವ ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಅಕ್ಟೋಬರ್ 12ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು, ಯಡ್ತರೆ, ಬೈಂದೂರು ಮತ್ತು ಬಿಜೂರು ಗ್ರಾಮ ಹಾಗೂ ಕುಂದಾಪುರ ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ, ಹಂಗಳೂರು ಮತ್ತು ಕೋಟೇಶ್ವರ ಗ್ರಾಮಗಳಲ್ಲಿ ಹಾಗೂ ಅಕ್ಟೋಬರ್ 14 ರಂದು ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶೀಯ ಮದ್ಯ ಮಾರಾಟ) ನಿಯಮಗಳು 1968 ರ ನಿಯಮ 3 ರಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ನಿಗಧಿಪಡಿಸಿದ ದಿನಾಂಕಗಳಂದು ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ರ ವರೆಗೆ ನಿಷೇಧಿಸಿ, ಒಣದಿನ ಎಂದು ಘೋಷಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
Religious
ಉಡುಪಿ : ನವರಾತ್ರಿಯ 9 ದಿನಗಳ ಕಾಲ ಉಡುಪಿಯ ಕೃಷ್ಣದೇವರು ಹೆಣ್ಣಿನ ಅಲಂಕಾರದಲ್ಲಿ ದರ್ಶನ ನೀಡುವುದು ವಿಶೇಷ. ಪ್ರತಿದಿನವೂ ಕೃಷ್ಣದೇವರಿಗೆ ನಾನಾ ಬಗೆಯ ಅಲಂಕಾರಗಳನ್ನು ಮಾಡಲಾಗುತ್ತದೆ. ಆದರೆ ನವರಾತ್ರಿಯ 9 ದಿನಗಳ ಕಾಲ ನಾನಾ ಬಗೆಯ ಸ್ತ್ರೀ ಶಕ್ತಿಯ ರೂಪಗಳನ್ನು ಕೃಷ್ಣ ದೇವರಲ್ಲಿ ಕಾಣಬಹುದು.
ಕೇವಲ ಅಷ್ಟಮಠಾಧೀಶರು ಮಾತ್ರ ಕೃಷ್ಣದೇವರಿಗೆ ಪೂಜೆ ಮಾಡುವ ಸಂಪ್ರದಾಯ ಇದೆ. ಹಾಗಾಗಿ 9 ದಿನಗಳ ಕಾಲ ಕೃಷ್ಣದೇವರಿಗೆ ಸ್ವಾಮೀಜಿಗಳೇ ವಿಶೇಷ ಸ್ತ್ರೀ ರೂಪದ ಅಲಂಕಾರಗಳನ್ನು ಮಾಡಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ. ಸದ್ಯ ಶ್ರೀ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, ಸ್ವಾಮೀಜಿಗಳು ಮಾಡಿದ ಈ ಅಲಂಕಾರ ಭಕ್ತರ ಗಮನ ಸೆಳೆದಿದೆ. ಕೇವಲ ನವರಾತ್ರಿಯ ಸಂದರ್ಭ ಮಾತ್ರವಲ್ಲ ಪ್ರತಿ ಶುಕ್ರವಾರದಂದು ಉಡುಪಿಯ ಕೃಷ್ಣ ದೇವರಿಗೆ ಹೆಣ್ಣಿನ ಅಲಂಕಾರ ಮಾಡಲಾಗುತ್ತದೆ.
ಉಡುಪಿ : ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದಲ್ಲಿ, ಅಪರೂಪದ ಕಾರ್ಯಕ್ರಮ ನಡೆಯಿತು. ಏಕಕಾಲದಲ್ಲಿ 101 ಮಂದಿ ಕಲಾವಿದರು ಸಾಮೂಹಿಕವಾಗಿ ವೀಣೆ ನುಡಿಸುವ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದರು. ದೇವರಸ್ತುತಿಗಳನ್ನು ಶೃತಿಬದ್ಧವಾಗಿ ಕೇಳುವ ಅಪೂರ್ವ ಅವಕಾಶ ಭಕ್ತರಿಗೆ ಸಿಕ್ಕಿತು.
ವಿದ್ವಾನ್ ಪವನಾ ಆಚಾರ್ಯ ಅವರ ನೇತೃತ್ವದ ತಂಡ ಎರಡು ಗಂಟೆಗಳಿಗೂ ಅಧಿಕಕಾಲ ಈ ಅಪೂರ್ವ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಚ್ಚಿಲ ದಸರಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ನಿಟ್ಟಿನಲ್ಲಿ, ವರ್ಷಂ ಪ್ರತಿ ಈ ಸಾಮೂಹಿಕ ವೀಣಾ ವಾದನ ಕಾರ್ಯಕ್ರಮ ನಡೆಸಲಾಗುತ್ತದೆ. ಏಕಕಾಲದಲ್ಲಿ 101 ವೀಣೆಗಳ ಜೇಂಕಾರ ಕೇಳುವುದೇ ಒಂದು ಅಪೂರ್ವ ಅನುಭವವಾಗಿದೆ.
ಉಡುಪಿ : ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯ ಜತೆಗೆ ಧರ್ಮ ಶಿಕ್ಷಣದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಅರುಣ್ ಉಳ್ಳಾಲ ಅವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ.
ಉಳ್ಳಾಲ ತಾಲೂಕಿನ ಕಿನ್ಯ ಬೆಳರಿಂಗೆಯ ಕೇಶವ ಶಿಶುಮಂದಿರದಲ್ಲಿ ನವದಂಪತಿಗಳ ಸಮಾವೇಶದಲ್ಲಿ ಹಿಂದೂ ವಿಚಾರ ಪದ್ಧತಿಗಳ ಮತ್ತು ಕೌಟುಂಬಿಕ ಸಂಗತಿಗಳ ಬಗ್ಗೆ ಬೋಧನೆ ಮಾಡುತ್ತ, ಹಿಂದೂ ಸಮಾಜದ ಮಕ್ಕಳು ಹಿಂದೂ ಸಂಸ್ಕೃತಿಯ ಸಂಸ್ಕಾರ ನೀಡುವ ಶಾಲೆಗಳಿಗೆ ಹೋದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನೆಪ ಮಾಡಿಕೊಂಡು ಅವರ ಮೇಲೆ ಕೇಸು ದಾಖಲಿಸಲಾಗಿದೆ. ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡಿದ ಉಪನ್ಯಾಸಕರ ಮೇಲೆ ಕೇಸು ದಾಖಲು ಮಾಡುವ ಮೂಲಕ, ಸರಕಾರ ಕೂಡ ಸಮಾಜದಲ್ಲಿ ಅಶಾಂತಿ, ಅಸಮಾನತೆಗೆ ಪ್ರೋತ್ಸಾಹಿಸುವವರ ಪರ ನಿಂತಿರುವುದು ಇದರಿಂದ ಸ್ಪಷ್ಟವಾಗಿದೆ, ದಾಖಲಿಸಿಕೊಂಡ ಕೇಸ್ ಅನ್ನು ತಕ್ಷಣವೇ ವಾಪಸ್ ತೆಗೆದುಕೊಳ್ಳಬೇಕು.
ಮಂಗಳೂರು ಪೊಲೀಸರು ಸ್ವಯಂ ಪ್ರೇರಿತ ಕೇಸನ್ನು ದಾಖಲಿಸುವ ಮೂಲಕ ರಾಜ್ಯ ಸರಕಾರಕ್ಕೆ ಖುಷಿ ಪಡಿಸುವ ಉದ್ದೇಶ ಹೊಂದಿದೆ. ಈ ಹಿಂದೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ, ರಾಜಭವನಕ್ಕೆ ನುಗ್ಗುತ್ತೇವೆ ಎಂದು ಹೇಳಿಕೆ ಕೊಟ್ಟರೂ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳದೆ, ಈಗ ಹಿಂದೂ ಧರ್ಮದ ಬಗ್ಗೆ ಮಾತನಾಡುವವರ ಬಗ್ಗೆ ಕೇಸು ದಾಖಲಿಸಲು ತೋರಿಸುವ ಆಸಕ್ತಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಿರಂತರ ಕೇಸು ದಾಖಲಿಸುತ್ತಿರುವ ಹಿಂದೂ ವಿರೋಧಿ ರಾಜ್ಯ ಸರ್ಕಾರಕ್ಕೆ ನನ್ನ ದಿಕ್ಕಾರವಿದೆ. ಡಾ ಅರುಣ್ ಉಳ್ಳಾಲ ಅವರ ಮೇಲೆ ಕೇಸು ದಾಖಲಿಸಿದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಕಾರ್ಕಳ ಅವರು ತಿಳಿಸಿದ್ದಾರೆ.
ಕೋಟ : ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ನಾಲ್ಕನೆ ದಿನದ ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಕುಟುಂಬಿಕರು ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮದಲ್ಲಿ ಸೇವಾಕರ್ತರಾಗಿ ಭಾಗಿಯಾದರು. ದೇಗುಲದ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ಜರಗಿತು.

ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಲಕ್ಷ್ಮೀ ನರಸಿಂಹ ಪೂಜಾರಿ ಹಾಡಿಕೆರೆ ಕುಟುಂಬಿಕರಿಗೆ ಪ್ರಸಾದ ವಿತರಿಸಿ ಗೌರವಿಸಿದರು. ದೇಗುಲದಲ್ಲಿ ದೇವಿಯ ನಾಲ್ಕನೆ ದಿನದ ಕುಷ್ಮಾಂಡ ಅವತಾರದಲ್ಲಿ ಅಮೃತೇಶ್ವರೀ ಪುಷ್ಭಾಂಲಕಾರ ಭಕ್ತರ ಗಮನ ಸೆಳೆದಳು. ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಮಾಜಿ ಟ್ರಸ್ಟಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿವರ್ಗ, ದೇಗುಲ ಅರ್ಚಕ ವೃಂದ ಉಪಸ್ಥಿತರಿದ್ದರು. ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಭಾಗಿಯಾದರು. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಚಿತ್ರಕಲೆಯ ಮೂಲಕ ಬಾಲ್ಯದಿಂದಲೇ ಧಾರ್ಮಿಕ ಪ್ರಜ್ಞೆ ಬೆಳೆಸೋಣ : ಯಶ್ಪಾಲ್ ಸುವರ್ಣ
ಉಚ್ಚಿಲ : ಕಳೆದ 3 ವರ್ಷಗಳಿಂದ ನಿರಂತರವಾಗಿ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದು, ಚಿತ್ರಕಲೆಯ ಮೂಲಕ ಬಾಲ್ಯದಿಂದಲೇ ಸನಾತನ ಧರ್ಮದ ಧಾರ್ಮಿಕ ಪ್ರಜ್ಞೆ, ಸೃಜನಶೀಲತೆ ಬೆಳೆಸಲು ಈ ಸ್ಪರ್ಧೆ ಸಹಕಾರಿಯಾಗಲಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ನಾಡೋಜ ಡಾ. ಜಿ. ಶಂಕರ್ ಮಾತನಾಡಿ ಮಹಾಲಕ್ಷ್ಮೀ ಬ್ಯಾಂಕ್ ಉಚ್ಚಿಲ ದಸರಾ ಮಹೋತ್ಸವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತಿದ್ದು ಪ್ರತಿವರ್ಷ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ವತಿಯಿಂದ ಕೇಕ್ ಕತ್ತರಿಸುವ ಮೂಲಕ ನಾಡೋಜ ಡಾ ಜಿ. ಶಂಕರ್ರವರ ಹುಟ್ಟು ಹಬ್ಬವನ್ನು ಆಚರಿಸಿ, ಪುಟಾಣಿ ಮಕ್ಕಳು ಗುಲಾಬಿ ಹೂ ನೀಡಿ ಶುಭಾಶಯ ಕೋರಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ 575 ಮಂದಿ ಭಾಗವಹಿಸಿದ್ದು, ತೀರ್ಪುಗಾರರಾಗಿ ಹಿರಿಯ ಕಲಾವಿದರಾದ ಶ್ರೀ ರಮೇಶ್ ಕಿದಿಯೂರು, ಶ್ರೀ ಶೇಖರ್ ಕಲಾಪ್ರತಿಭಾ, ಶ್ರೀಧರ್ ತೊಟ್ಟಂ ಸಹಕರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಬಬಿತಾ ಅರಸ್, ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್, ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಶಾರಿಕ ಕಿರಣ್ ಉಪಸ್ಥಿತರಿದ್ದರು. ಬ್ಯಾಂಕಿನ ಸಿಬ್ಬಂದಿ ಶ್ರೀಮತಿ ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಡುಪಿ : ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸಂಪನ್ನಗೊಳ್ಳುತ್ತಿರುವ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಗತಕಾಲದ ಕ್ಷೇತ್ರ ಇತಿಹಾಸ ತಿಳಿಸುವಂತೆ ನಾಟ್ಯರಾಣಿ ಗಂಧರ್ವ ಕನ್ಯೆ ದೇವಿಯಿಂದ ಅನುಗ್ರಹಿತಳಾದ ತಾಣದಲ್ಲಿ ಕಲಾವಿದರಿಗೆ ವಿಶೇಷವಾಗಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನಲೆಯಲ್ಲಿ ಅನೇಕ ಕಲಾವಿದರು ತಮ್ಮ ಕಲಾ ಕಾಣಿಕೆಯನ್ನು ಪರ್ವಕಾಲದಲ್ಲಿ ಸಮರ್ಪಿಸಿ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಹಾಗಾಗಿ ಕ್ಷೇತ್ರ ಸಾಂಸ್ಕೃತಿಕ ವೈಭವವನ್ನು ಪಡೆದುಕೊಂಡಿದೆ.
ಗಾನ-ನಾಟ್ಯ-ನಾದ ಪ್ರಿಯಳೆಂದು ಪ್ರಖ್ಯಾತಿ ಹೊಂದಿರುವ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ನೃತ್ಯಾರ್ಥಿಗಳು ತಮ್ಮ ನೃತ್ಯ ಸೇವೆಯನ್ನ ಸಮರ್ಪಿಸಿ ಕೃತಾರ್ಥರಾಗುತ್ತಿದ್ದಾರೆ.
ನಾದ ವಾದಕರು ನಾದ ಸೇವೆಯನ್ನು ನೀಡಿ, ಗಾಯಕರು ತಮ್ಮ ಗಾಯನ ಸೇವೆಯನ್ನು ನೀಡಿ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳುವುದು ಉಲ್ಲೇಖನೀಯ.
ಸೇವೆ ನೀಡಿದ ಕಲಾವಿದರನ್ನು ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸುತ್ತಿದ್ದಾರೆ.
ಕ್ಷೇತ್ರ ರಚನೆಗೆ ಕಾರಣೀಭೂತರಾದ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿಯೂ ಕೂಡ ಕಲಾವಿದರು ತಮ್ಮ ಕಲಾ ಸೇವೆಯನ್ನು ಸಮರ್ಪಿಸಿ ಗುರುಗಳ ಅನುಗ್ರಹಕ್ಕೂ ಪಾತ್ರರಾಗುತ್ತಿದ್ದಾರೆ ಇದು ಈ ಬಾರಿಯ ನವರಾತ್ರಿಯ ವಿಶೇಷ ಎನ್ನುತ್ತಾರೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್.
ಕ್ಷೇತ್ರದಲ್ಲಿ ಪ್ರಾತಃಕಾಲದಿಂದಲೇ ಭಜನೆ ಸಂಕೀರ್ತನೆ ಲಕ್ಷ್ಮೀಶೋಭಾನೆ ಲಲಿತಾ ಸಹಸ್ರನಾಮ ಸುಗಮ ಸಂಗೀತ ನಿರಂತರವಾಗಿ ಕ್ಷೇತ್ರಕ್ಕೆ ಸಮರ್ಪಿತವಾಗುತ್ತಿವೆ.
ಷಷ್ಠಿ ತಿಥಿಯಿಂದ ಅಕ್ಷರಭ್ಯಾಸಕ್ಕೆ ಚಾಲನೆ
ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ತಾರೀಕು 9ರ ಬುಧವಾರ ಷಷ್ಟಿ ತಿಥಿಯಿಂದ ಮಕ್ಕಳಿಗೆ ಅಕ್ಷರಭ್ಯಾಸಕ್ಕೆ ಚಾಲನೆ ದೊರೆಕಲಿದೆ. ಅಂದು ಬೆಳಿಗ್ಗೆ 11:00 ಯಿಂದ ಅಕ್ಷರಭ್ಯಾಸ ಆರಂಭವಾಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ


ದೇವಾಲಯಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿಸುತ್ತಿದ್ದ ಇಂದ್ರಾಳಿ ಶ್ರೀಧರ್ ಭಟ್ ನಿಧನ
ಉಡುಪಿ : ಇಂದ್ರಾಳಿ ಶ್ರೀಧರ್ ಭಟ್(66) ಇವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಶನಿವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಇವರು ಹಲವಾರು ದೇವಾಲಯಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಇಂದ್ರಾಳಿ ದೇವಸ್ಥಾನದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.
ಇಂದ್ರಾಳಿ ಪರಿಸರದಲ್ಲಿ ಜನಾನುರಾಗಿಯಾಗಿದ್ದು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇವರು ಪತ್ನಿ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಭಾರತ್ ಸ್ಕೌಟ್ & ಗೈಡ್ಸ್ ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಸಂತಾಪ ವ್ತಕ್ತ ಪಡಿಸಿದ್ದಾರೆ.
ಮಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ನಟಿ ರಕ್ಷಿತಾ ಪ್ರೇಮ್ ಅವರು ಗುರುವಾರ ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ತದನಂತರ ಕಾರಲ್ಲಿ ಹೊರಡುವ ಸಮಯದಲ್ಲಿ ನವರಾತ್ರಿಯ ವಿಶೇಷ ದಿನದಂದು ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಹುಲಿ ವೇಷವನ್ನು ಕಂಡು ಕಾರಿನಿಂದ ಇಳಿದರು. ತಕ್ಷಣ ಸುಬ್ರಹ್ಮಣ್ಯದ ಖ್ಯಾತ ಫೋಟೋಗ್ರಾಫರ್ ಸಂತೋಷ್ ನುಚಿಲ ಅವರು ರಕ್ಷಿತ್ ಪ್ರೇಮ್ ದಂಪತಿಗಳಿಗೆ ಹುಲಿ ವೇಷ ನರ್ತನವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿದ್ದಾರೆ.
ಹುಲಿ ವೇಷದಾರಿಗಳ ನರ್ತನವನ್ನು ಕಂಡು ಪುಳಕಿತರಾದ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ರಕ್ಷಿತ್ ಪ್ರೇಮ್ ದಂಪತಿಗಳು ಎಲ್ಲಾ ವೇಷಧಾರಿಗಳಿಗೆ ಶುಭಾಶಯವನ್ನು ಕೋರಿದರು.
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಕ್ಷೇತ್ರದ ವತಿಯಿಂದ ಜಿಯೂಸ್ ಫಿಟ್ನೆಸ್ ಕೇಂದ್ರ, ಖೋಲೋ ಇಂಡಿಯಾ ಹಾಗೂ ಡೆಕತ್ಲಾನ್ ಸಹಭಾಗಿತ್ವದಲ್ಲಿ ಅ.6ರಂದು ದಸರಾ ಹಾಫ್ ಮ್ಯಾರಥಾನ್ ಪಂದ್ಯಾಟ ನಡೆಯಲಿದೆ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ವನ್ ಸಿಟಿ ವನ್ ಸ್ಪಿರಿಟ್’ ಧ್ಯೇಯದೊಂದಿಗೆ ‘ಎಲ್ಲಿ ಒಗ್ಗಟ್ಟಿದೆಯೂ ಅಲ್ಲಿ ಬಲವಿದೆ’ ಎಂಬ ವಾಕ್ಯದೊಂದಿಗೆ ಈ ಪಂದ್ಯಾಟ ನಡೆಯಲಿದೆ. 21 ಕಿ.ಮೀ., 10 ಕಿ.ಮೀ. ಹಾಗೂ 5 ಕಿ.ಮೀ.ಗಳ ಮೂರು ವಿಭಾಗಗಳಲ್ಲಿ ಹಾಫ್ ಮಾರಥಾನ್ ಆಯೋಜಿಸಲಾಗಿದೆ ಎಂದರು.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿರುವ ಹಾಫ್ ಮ್ಯಾರಥಾನ್ನಲ್ಲಿ ಪ್ರಥಮ ವಿಜೇತರಿಗೆ 25ಸಾವಿರ ರೂ. ನಗದು ಬಹುಮಾನ, ದ್ವಿತೀಯ ಬಹುಮಾನ 15ಸಾವಿರ ರೂ. ಆಗಿರುತ್ತದೆ. 21 ಕಿ.ಮೀ. ಮ್ಯಾರಥಾನ್ ಬೆಳಗ್ಗೆ 5 ಗಂಟೆಗೆ, 10 ಕಿ.ಮೀ. ಮ್ಯಾರಥಾನ್ 5.30ಕ್ಕೆ ಹಾಗೂ 5ಕಿ.ಮೀ. ನಡಿಗೆ 6.30ಕ್ಕೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಳ್ಳಲಿದೆ.
ಹಾಫ್ ಮ್ಯಾರಥಾನ್ ಕ್ಷೇತ್ರದಿಂದ ಹೊರಟು ನಾರಾಯಣ ಗುರು ಸರ್ಕಲ್ ಆಗಿ, ಚಿಲಿಂಬಿ, ಪೈ ಸೇಲ್ಸ್ ದೇರೆಬೈಲ್, ಕರ್ನಾಟಕ ಬ್ಯಾಂಕ್, ಭಾರತ್ ಮಾಲ್, ಬಿಜೈನಿಂದ ಕದ್ರಿ ದೇವಸ್ಥಾನ ರಸ್ತೆ ಮಾರ್ಗವಾಗಿ, ಮಲ್ಲಿಕಟ್ಟೆ ಭಾರತ್ ಬೀಡಿ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಫಾರಂ ಮಾಲ್, ಕ್ಲಾಕ್ಟವರ್ ಆಗಿ ವೆಂಕಟರಮಣ ದೇವಸ್ಥಾನದ ಬಳಿಯಿಂದ ಕ್ಷೇತ್ರಕ್ಕೆ ಹಿಂತಿರುಗಲಿದೆ. ಮ್ಯಾರಥಾನ್ನಲ್ಲಿ ಭಾಗವಹಿಸುವವರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಸ್ವಯಂ ಸೇವಕರ ಜತೆಗೆ, ಫಿಸಿಯೋತೆರಪಿಸ್ಟ್ಗಳು, ಆ್ಯಂಬುಲೆನ್ಸ್ಗಳನ್ನು ನಿಗದಿತ ಸ್ಥಗಳಲ್ಲಿ ಸ್ಥಿತಗೊಳಿಸಲಾಗಿರುತ್ತದೆ. ಮ್ಯಾರಥಾನ್ನಲ್ಲಿ ಭಾಗವಹಿಸುವವರಿಗೆ ಲೋಕೇಷನ್ ದೃಷ್ಟಿಯಿಂದ ಮೈಕ್ರೋ ಚಿಪ್ಗಳನ್ನು ನೀಡಲಾಗುತ್ತದೆ. ಭಾಗವಹಿಸುವ ಎಲ್ಲರಿಗೂ ಪದಕ ಹಾಗೂ ಪ್ರಮಾಣ ಪತ್ರ, ಟೀಶರ್ಟ್ಗಳನ್ನು ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಈಗಾಗಲೇ 1200ರಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದು, ಸ್ಥಳದಲ್ಲೇ ನೋಂದಣಿಗೂ ಅವಕಾಶವಿರಲಿದೆ. ಸುಮಾರು 2000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸಹಿತ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ರಕ್ಷಿತ್, ಜಯರಾಂ ಶಾಂ ಸುಂದರ್, ರಾಜೇಶ್, ರವಿ, ಧನರಾಜ್, ಸುಖ್ಪಾಲ್ ಪೊಳಲಿ, ರಕ್ಷಿತ್ ಉಪಸ್ಥಿತರಿದ್ದರು.