Problems
ಟೈಗರ್ ಕಾರ್ಯಾಚರಣೆಯಿಂದ ತಿರುಗಿಬಿದ್ದ ಬೀದಿಬದಿ ವ್ಯಾಪಾರಿಗಳು – ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ
ಮಂಗಳೂರು : ಮಹಾನಗರ ಪಾಲಿಕೆಯಿಂದ ನಡೆದ ಟೈಗರ್ ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಸ್ಥರು ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಮನಪಾ ಅಧಿಕಾರಿಗಳು ನಿನ್ನೆ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ನಗರದ ಮಣ್ಣಗುಡ್ಡ, ಲೇಡಿಹಿಲ್, ಯೆಯ್ಯಾಡಿ, ಸೆಂಟ್ರಲ್ ಮಾರುಕಟ್ಟೆಯಲ್ಲಿನ ಗೂಡಂಗಡಿಗಳ ಮೇಲೆ ಅಂಗಡಿಗಳನ್ನು ಬುಲ್ಡೇಜರ್ ಹತ್ತಿಸಿ ಪುಡಿಪುಡಿಗಟ್ಟಿದ್ದರು. ಬೀದಿಬದಿ ವ್ಯಾಪಾರಿಗಳ ಅಳಲು, ಪ್ರತಿಭಟನೆಗಳಿಗೂ ಜಗ್ಗದೆ ಅಲ್ಲಿಂದ ತೆರುವ ಮಾಡಿಸಲಾಗಿತ್ತು. ಇದರಿಂದ ಆಕ್ರೋಶಿತರಾದ ನೂರಾರು ಬಿದಿಬದಿ ವ್ಯಾಪಾರಿಗಳು ಮನಪಾ ಆಯುಕ್ತರ ಕಚೇರಿಯ ಬಾಗಿಲಿನಲ್ಲಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದರು. ಮನಪಾ ಮೇಯರ್ ಇಂದೋರ್ ಪ್ರವಾಸದಲ್ಲಿದ್ದು, ಆಯುಕ್ತರು ಕಚೇರಿಗೆ ಬಂದಿಲ್ಲ. ಅವರು ಬರುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಬೀದಿಬದಿ ವ್ಯಾಪಾರಿಗಳು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮನಪಾದ ಓರ್ವ ಸಿಬ್ಬಂದಿ ಹಾಗೂ ಬೀದಿಬದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅವರನ್ನು ಹೊರಗಡೆ ಕಳುಹಿಸಬೇಕೆಂದು ಬೀದಿಬದಿ ವ್ಯಾಪಾರಸ್ಥರು ಪಟ್ಟು ಹಿಡಿದ ಬಳಿಕ ಅವರನ್ನು ಹೊರಗಡೆ ಕಳುಹಿಸಲಾಯಿತು.
ಬಳಿಕ ಅಲ್ಲಿಗೆ ಮನಪಾ ಜಂಟಿ ಆಯುಕ್ತ ರವಿ ಕುಮಾರ್ ಅಲ್ಲಿಗೆ ಆಗಮಿಸಿ ಬೀದಿಬದಿ ವ್ಯಾಪಾರಿಗಳನ್ನು ಮನವೊಲಿಸುವ ಕಾರ್ಯ ಮಾಡಿದರು. ಆದರೆ ಆಕ್ರೋಶಿತ ವ್ಯಾಪಾರಿಗಳು ಅವರನ್ನೇ ತರಾಟೆಗೆ ತೆಗೆದುಕೊಂಡು, ಮನಪಾ ಐಡಿ ಕಾರ್ಡ್ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಿತ್ತು. ಇದೀಗ ಸಹಾಯಕ ಆಯುಕ್ತರು ಅದು ಐಡಿ ಕಾರ್ಡ್ ನಕಲಿ ಎನ್ನುತ್ತಿದ್ದಾರೆ. ಹಾಗಾದರೆ ನಕಲಿ ಐಡಿ ಕಾರ್ಡ್ಗೆ ಸಹಿ ಹಾಕಿರುವ ತಮ್ಮನ್ನೇ ಬಂಧಿಸಬೇಕಲ್ಲವೇ? ಕೆಲ ಅಧಿಕಾರಿಗಳು ಮದ್ಯಸೇವನೆ ಮಾಡಿ ಬಂದಿದ್ದಾರೆ. ಸೀಝ್ ಮಾಡಲಾಗಿರುವ ವಸ್ತುಗಳನ್ನು ವಾಪಾಸ್ ಕೊಡಿ. ಜಖಂಗೊಳಿಸಿರುವ ವಸ್ತುಗಳಿಗೆ ಪರಿಹಾರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ : ಅಂಧ ಹಾಗೂ ಮಾನಸಿಕ ಅಸ್ವಸ್ಥ ಯುವಕನಿಗೆ ಕಾರ್ಕಳ ಬೈಲೂರಿನ ರಂಗನಪಲ್ಕೆಯ ಹೊಸಬೆಳಕು ಆಶ್ರಮ ಆಶ್ರಯ ನೀಡಿ ಮಾನವೀಯತೆ ಮೆರೆದಿದೆ.

ಯುವಕ ರಾಜೇಶ್ (27) ಹೊರ ರಾಜ್ಯದವನಾಗಿದ್ದು, ದೃಷ್ಟಿ ಹೀನನಾಗಿದ್ದು ಜೊತೆಗೆ ಮಾನಸಿಕ ಅಸ್ವಸ್ಥತೆಗೆ ಜಾರಿದ್ದ. ಈತ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದ.
ಸಂಬಂಧಿಕರು ಪತ್ತೆಯಾಗದ ಕಾರಣ ಯುವಕ ಬೀದಿ ಪಾಲಾಗಿ ಬದುಕು ಸಂಕಷ್ಟಕ್ಕೀಡಾಗಲಿದೆ ಎಂದು ಅರಿತ ಸಮಾಜ ಸೇವಕ ವಿಶು ಶೆಟ್ಟಿ ಅವರು, ಹೊಸಬೆಳಕು ಆಶ್ರಮದ ಮುಖ್ಯಸ್ಥೆ ತನುಲಾ ಅವರನ್ನು ಸಂಪರ್ಕಿಸಿ, ಯುವಕನಿಗೆ ಆಶ್ರಯ ನೀಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದನೆ ದೊರೆತ ಹಿನ್ನಲೆಯಲ್ಲಿ ಯುವಕನನ್ನು ಆಂಬುಲೆನ್ಸ್ ಮೂಲಕ ಆಶ್ರಮಕ್ಕೆ ಕರೆದೊಯ್ದು ದಾಖಲಿಸಿದರು.
ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಉದ್ಯಾವರ ರಾಮದಾಸ್ ಪಾಲನ್ ನೆರವಾದರು.
ಯುವಕನ ವಾರೀಸುದಾರರು ಇದ್ದಲ್ಲಿ ಹೊಸಬೆಳಕು ಆಶ್ರಮ (ದೂ.ಸಂಖ್ಯೆ 6364777100)ವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ಜು 31 ರಂದು ರಜೆಯನ್ನು ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ನಾಳೆ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಮಣಿಪಾಲ : ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಇದರ ವತಿಯಿಂದ ಸಮುದಾಯದ ಯುವ ಜನರ 100% ಉದ್ಯೋಗ ಭರವಸೆ ಈಡೇರಿಕೆಗಾಗಿ ಹಾಗೂ ಕೃಷಿ ಭೂಮಿ ಹಕ್ಕು ಪತ್ರ ಮಂಜೂರಾತಿಗಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕಳೆದ 7 ದಿನಗಳಿಂದ ಅಹೋ ರಾತ್ರಿ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಇಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೊರಗ ಸಮುದಾಯದ ಜೊತೆಯಲ್ಲಿ ಇರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮನವಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಮಳೆ ನಿರಂತರವಾಗಿ ಧಾರಾಕಾರವಾಗಿ ಸುರಿಯುತ್ತಿದ್ದು, ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ನದಿ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಘಟನೆ ನಡೆದಿದೆ.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರು 29.6ಮೀಟರ್ನಲ್ಲಿದ್ದು, ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಪರಿಣಾಮ ನದಿನೀರು ಹಲವಾರು ಮನೆಗಳು ಸೇರಿದಂತೆ ಕೃಷಿ ತೋಟಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಪಂಜಳದಲ್ಲಿ ನದಿ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಪರಿಣಾಮ ರಸ್ತೆ ಸಂಚಾರ ವ್ಯವಸ್ಥೆಗೂ ಸಂಕಷ್ಟ ತಂದೊಡ್ಡಿದೆ. ಸದ್ಯ ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು, ಸ್ಥಳೀಯರ ನೆರವಿನಿಂದ ಸುರಕ್ಷಿತವಾಗಿ ವಾಹನಗಳನ್ನು ಕಳುಹಿಸುತ್ತಿದ್ದಾರೆ. ಅಲ್ಲದೆ ರಸ್ತೆಯುದ್ದಕ್ಕೂ ವಾಹನಗಳು ನಿಂತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಬೈಂದೂರು : ಬೈಂದೂರು ತಾಲ್ಲೂಕು ನಾಗೂರು ಉಡುಪರ ಹಿತ್ತಲಿನ ತೋಟದಲ್ಲಿ ಇರುವ ಸಿಹಿ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ.
ಸ್ಥಳೀಯರು ಅದನ್ನು ನೋಡಿ ಹೌಹಾರಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಮೊಸಳೆಗಳ ಕಾಣಿಸುವುದು ಅಪರೂಪ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೋಳಿ ಮಾಂಸ ಹಾಕಿ ಮೊಸಳೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಮೊಸಳೆ ಈ ಭಾಗದಲ್ಲಿ ತೇಲಿ ಬಂದಿರಬಹುದೆಂದು ಶಂಕೆ ವ್ಯಕ್ತವಾಗುತ್ತಿದೆ.
ಮೊಸಳೆ ಬೃಹತ್ ಗಾತ್ರದ್ದಾಗಿದ್ದು, ಸ್ಥಳೀಯ ಜನರ ಪರಿಸರದಲ್ಲಿ ಹೆಚ್ಚಿದ ಆತಂಕವನ್ನು ಉಂಟುಮಾಡಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಚಕ್ರತೀರ್ಥ ಮಾರ್ಗದ ಕಿರು ಸೇತುವೆ ಹಾನಿ : ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ
ಉಡುಪಿ ನಗರಸಭೆ ವ್ಯಾಪ್ತಿಯ ಮೂಡುಸಗ್ರಿ ವಾರ್ಡಿನಲ್ಲಿ ಮಳೆಯಿಂದಾಗಿ ಹಾನಿಗೀಡಾದ ಚಕ್ರತೀರ್ಥ ಮಾರ್ಗದ ಕಿರುಸೇತುವೆ ವಾಹನ ಸಂಚಾರಕ್ಕೆ ಅಪಾಯ ಸ್ಥಿತಿಯಲ್ಲಿರುವ ಹಿನ್ನಲೆಯಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಈಗಾಗಲೇ ಸುಮಾರು ರೂ. 13 ಲಕ್ಷ ಅನುದಾನವನ್ನು ಕಿರು ಸೇತುವೆಯ ಮರು ನಿರ್ಮಾಣಕ್ಕೆ ಮಂಜೂರು ಮಾಡಿದ್ದು ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀಮತಿ ಭಾರತಿ ಪ್ರಶಾಂತ್, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್, ಸ್ಥಳೀಯ ಮುಖಂಡರಾದ ಶ್ರೀ ಈಶ್ವರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು : ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಭಾರೀ ಅವಾಂತರವನ್ನೇ ಸೃಷ್ಠಿಸಿದೆ. ಈ ನಡುವೆ ಅಂಡರ್ ಪಾಸ್ನಲ್ಲಿ ತುಂಬಿದ್ದ ನೀರಿನಲ್ಲಿ ಕೆಎಸ್ಆರ್ಟಿಸಿ ಬಸ್ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.
ಮಂಗಳೂರಿನಲ್ಲಿ ನಿನ್ನೆ ಸಂಜೆಯಿಂದಲೇ ಎಡೆಬಿಡದೆ ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಈ ನಡುವೆ ಮಂಗಳೂರಿನ ಪಡೀಲ್ ರೈಲ್ವೇ ಅಂಡರ್ ಪಾಸ್ನಲ್ಲಿ ನೀರು ನಿಂತಿದ್ದು ಈ ನೀರಿನಲ್ಲಿ ಕೆಎಸ್ಆರ್ಟಿಸಿ ಬಸ್ ಒಂದು ಸಿಕ್ಕಿಹಾಕಿಕೊಂಡಿದೆ.
ನೀರು ನಿಂತಿದ್ದರೂ ಬಸ್ ಚಾಲಕ ನೀರಿನಲ್ಲೇ ಬಸ್ನ್ನು ಓಡಿಸಿದ್ದಾನೆ. ಈ ವೇಳೆ ಬಸ್ಸಿನೊಳಗೆ ನೀರು ನುಗ್ಗಿ ತಾಂತ್ರಿಕ ದೋಷದಿಂದ ನೀರು ಮಧ್ಯೆದಲ್ಲೇ ಬಸ್ ಬಾಕಿಯಾಗಿದೆ. ಬಸ್ನೊಳಗಿದ್ದ ಪ್ರಯಾಣಿಕರು ಇಳಿಯಲಾಗದೆ ಬಸ್ನಲ್ಲೇ ಪರದಾಟ ಪರಿಸ್ಥಿತಿ ಉಂಟಾಗಿತ್ತು. ಮಂಗಳೂರು ನಗರದಿಂದ ಪಡೀಲ್, ಬಜಾಲ್, ಜಲ್ಲಿಗುಡ್ಡೆ ಪ್ರದೇಶಕ್ಕೆ ತೆರಳುವ ಬಸ್ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತದೆ.
ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ
ಕಾಪು : ಗಾಳಿ ಮಳೆಗೆ ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡಿನ ಹೀರಾ ಆರ್ ಮೆಂಡನ್ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಇಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಗರಿಷ್ಠ ಪರಿಹಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಪು ಪುರಸಭೆಯ ಸದಸ್ಯರಾದ ರಾಧಿಕಾ, ಪೊಲಿಪು ಮೋಗವೀರ ಮಹಾಸಭಾ ಅಧ್ಯಕ್ಷರಾದ ಶ್ರೀಧರ್ ಕಾಂಚನ್, ಕಾಪು ಪುರಸಭೆಯ ಮಾಜಿ ಸದಸ್ಯರಾದ ವಿಜಯ್ ಕರ್ಕೇರ, ಸ್ಥಳೀಯರಾದ ಸುಂದರ್ ಸುವರ್ಣ ಅಜಿತ್ ಮೆಂಡನ್ ಉಪಸ್ಥಿತರಿದ್ದರು.