ಉಡುಪಿ : ಯಕ್ಷಗಾನ ಕಲಾರಂಗ ಬೀಜಾಡಿಯಲ್ಲಿ ವಿದ್ಯಾಪೋಷಕ್ ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಮಾನ್ಯಳಿಗೆ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ ಜರಗಿತು. ಸಾಲಿಗ್ರಾಮದ ಮಂಟಪ ರಾಮ ಉಪಾಧ್ಯ- ಫಣಿಯಮ್ಮ ದಂಪತಿ ನೆನಪಿನಲ್ಲಿ ಅವರ ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಪ್ರಾಯೋಜಿಸಿದ ‘ಫಣಿರಾಮ’ ಮನೆಯನ್ನು ಮಂಟಪದ ಯಶೋಧಾ ಉಪಾಧ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಡಾ. ರತ್ನಾಕರ ಉಪಾಧ್ಯರು ತಮ್ಮ ಅಜ್ಜ ರಾಮ ಉಪಾಧ್ಯರ ಶಿಸ್ತು, ಪ್ರಾಮಾಣಿಕತೆ, ಪರೋಪಕಾರ ಬುದ್ಧಿ ನಮಗೆಲ್ಲ ಸ್ಫೂರ್ತಿ ಮತ್ತು ಪ್ರೇರಕ ಶಕ್ತಿಯಾಗಿದೆ. ಅಜ್ಜ ಅಜ್ಜಿಯರ ಹೆಸರಿನಲ್ಲಿ ಮನೆ ನಿರ್ಮಿಸಿ ಯಕ್ಷಗಾನ ಕಲಾರಂಗದ ಮಹಾಯಜ್ಞದಲ್ಲಿ ಭಾಗಿಯಾಗುವ ಅವಕಾಶ ಮಂಟಪ ಕುಟುಂಬಕ್ಕೆ ಧನ್ಯತೆ ತಂದಿದೆ ಎಂದರು. ಮಂಟಪ ನಟರಾಜ ಉಪಾಧ್ಯ ಮತ್ತು ವಿಜಯಲಕ್ಷ್ಮೀ ಮಾತನಾಡಿ ಯಕ್ಷಗಾನ ಕಲಾರಂಗ ಮಾಡುತ್ತಿರುವ ಕೆಲಸ ಊಹೆಗೂ ನಿಲುಕದ್ದು. ಸಮಾಜ ಮತ್ತು ಶಿಕ್ಷಣಕ್ಕೆ ಈ ಸಂಸ್ಥೆಯ ಕೊಡುಗೆ ಅನನ್ಯ ಎಂದು ಹರ್ಷ ವ್ಯಕ್ತಪಡಿಸಿದರು. ಬೀಜಾಡಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ವಿನೋದಾ ಎಂ. ಕುಮಾರಿ ಮಾನ್ಯಳ ನಿಯತ್ತಿನ ಕಲಿಕೆ, ಶಿಸ್ತು, ವಿಧೇಯತೆ ಅವಳ ಸಾಧನೆಗೆ ಕಾರಣ ಎಂದು ಹೇಳಿದರು.
ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ವಾಸುದೇವ ಕಾರಂತ್ ಮತ್ತು ವಿವೇಕ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವುಡ ಶುಭಾಶಂಸನೆಗೈದರು.