ಮೂಲ್ಕಿ : ಕಿನ್ನಿಗೋಳಿಯಲ್ಲಿ ಟೆಂಪೋ ರಿಕ್ಷಾ-ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರೆ ಮಮತಾ ಬಂಗೇರ (42) ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಕೆ.ಎಸ್.ರಾವ್ ನಗರ ತಿರುವಿನ ರಸ್ತೆಯಲ್ಲಿ ಗುರುವಾರ ಟೆಂಪೋ ರಿಕ್ಷಾವೊಂದು ಹಿಂಬದಿಯಿಂದ ಬಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಇವರು ಮುಂಬಯಿಯಲ್ಲಿ ವಾಸವಿದ್ದು, ಕಳೆದ ಕೆಲವು ಸಮಯಗಳಿಂದ ಶಿಮಂತೂರು ಬಳಿ ನೂತನವಾಗಿ ಮನೆ ನಿರ್ಮಿಸಿಕೊಂಡು ತಮ್ಮ ಪುತ್ರಿಯ ಜತೆ ವಾಸವಾಗಿದ್ದರು. ಮಹಿಳಾ ಸ್ವಸಹಾಯ ತಂಡ ಹಾಗೂ ಇತರ ಸಾಮಾಜಿಕ ಸಂಘಟನೆಯಲ್ಲಿ ಅವರು ಸಕ್ರಿಯರಾಗಿದ್ದರು.
ಅವರ ಪತಿ ಮೈಸೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಗಳು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಮಂಗಳೂರು ಉತ್ತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.