ಉಡುಪಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಅನೇಕ ಆಘಾತಗಳಿಗೆ ಒಳಗಾಗಿರುವ ಕಾಶ್ಮೀರಿ ಪಂಡಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ತಮ್ಮ ಪಾರಂಪರಿಕ ವೈದಿಕ ಸಂಸ್ಕಾರಗಳಿಂದ ವಂಚಿತರಾಗಿದ್ದಾರೆ. ಗತಕಾಲದ ವೈಭವವನ್ನು ಮರಳಿ ಪಡೆಯಲು ಉತ್ಸುಕರಾದ ಪಂಡಿತರ ಪ್ರತಿ ಮನೆಯಲ್ಲೂ ಭಗವದ್ಗೀತಾ-ವೇದ-ಸಂಸ್ಕೃತಾಧ್ಯಯನ ನಡೆಯಬೇಕು. ಇದರಿಂದ ಮಾತ್ರ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಬಿ. ಗೋಪಾಲಾಚಾರ್ಯರು ಕರೆ ನೀಡಿದರು.
ಅವರು ಜಮ್ಮು ನಿವಾಸಿಗಳಾದ ಕಾಶ್ಮೀರಿ ಪಂಡಿತ ಮಂಡಳಿಯ ಅಪೇಕ್ಷೆ ಹಾಗೂ ಆಹ್ವಾನದಂತೆ ಪರ್ಯಾಯ ಪೀಠಾಧಿಪತಿಗಳಾದ ಸುಗುಣೇಂದ್ರತೀರ್ಥ ಶ್ರೀಪಾದರ ಹಾಗೂ ಕಿರಿಯ ಪಟ್ಟದ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ ವಾದಿರಾಜ ಸಂಶೋಧನ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸಂಸ್ಕೃತ ಮತ್ತು ವೇದ ಹಾಗೂ ಶಾರದಾ ಲಿಪಿಯ ಶಿಕ್ಷಣ ಮುಂತಾದ ಅನೇಕ ಯೋಜನೆಗಳಿಗೆ ಜಮ್ಮುವಿನಲ್ಲಿ ಚಾಲನೆಯನ್ನು ನೀಡಲಾಯಿತು. ಭಾರತ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಇದರ ಶಾಖಾ ಕೇಂದ್ರವಾದ ರಣವೀರ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಗೋಪಾಲಾಚಾರ್ಯರು ಭಾಗವಹಿಸಿದ್ದರು.
ಸಿ.ಬಿ.ಐ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಮತ್ತು ಅತ್ಯಂತ ಪ್ರಸಿದ್ಧವಾದ ಮಾತಾ ವೈಷ್ಣೋದೇವಿ ದೇವಸ್ಥಾನದ ಅಧಿಕಾರಿ ಸುರೇಶ್ ಕುಮಾರ್ ಶರ್ಮಾ ಜೀ ಹಾಗೂ ಅನೇಕ ಸಂಸ್ಕೃತ ಉಪನ್ಯಾಸಕರು ಹಾಗೂ ವಿದ್ವತ್ ತರಗತಿಗಳ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
