ಬ್ರಹ್ಮಾವರ : ಅಣ್ಣನಿಂದ 10 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಸುಳ್ಳುಹೇಳಿ ಪಡೆದು ತಂಗಿಯೇ ವಂಚಿಸಿ, ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಾರಾಡಿಯಲ್ಲಿ ನಡೆದಿದೆ.

ಹಾರಾಡಿ ಗ್ರಾಮದಲ್ಲಿ ವಾಸವಾಗಿರುವ ವಿಶ್ವನಾಥ್ ಇವರ ಮನೆಗೆ ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಬಂದ ಆರೋಪಿ ತಂಗಿ ನೇತ್ರಾವತಿ ಬಂದಿದ್ದು, ಮನೆಯಲ್ಲಿ ಕೆಲವು ದಿನ ಉಳಿದಿದ್ದರು. ಈ ವೇಳೆ ತನ್ನ ಚಿನ್ನಾಭರಣಗಳೆಲ್ಲಾ ಬ್ಯಾಂಕ್ ಲಾಕರ್ನಲ್ಲಿದ್ದು ಕೀ ಗಂಡನ ಮನೆಯಲ್ಲಿದೆ. ಈಗ ಕೆಲವು ಮದುವೆಗೆ ಹೋಗಬೇಕಿರುವುದರಿಂದ ನಿನ್ನ ಹೆಂಡತಿಯ ಚಿನ್ನಾಭರಣ ನೀಡುವಂತೆ ಕೇಳಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ತಂಗಿಯ ಮೇಲಿನ ನಂಬಿಕೆಯಿಂದ ವಿಶ್ವನಾಥ್ ಅವರ ಹೆಂಡತಿಯ ಬಂಗಾರದ ಸರ, ಬಂಗಾರದ ನೆಕ್ಲೆಸ್ ಹಾಗೂ ಬಂಗಾರದ ಚೈನ್ ಸೇರಿದಂತೆ ಒಟ್ಟು 140.21 ಗ್ರಾಮ್ ತೂಕದ 10 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಅವರಿಗೆ ನೀಡಿದ್ದು, ಆರೋಪಿ ತಂಗಿ ಇದುವರೆಗೂ ಪಡೆದುಕೊಂಡ ಚಿನ್ನಾಭರಣಗಳನ್ನು ಮರಳಿಸಿಲ್ಲ. ಕೇಳಿದರೆ ಸುಳ್ಳು ಕಾರಣಗಳನ್ನು ಹೇಳಿ ಬೆದರಿಕೆಯನ್ನು ಹಾಕುತ್ತಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.