ಬೆಳ್ತಂಗಡಿ : ವಿದ್ಯುತ್ ಆಘಾತಕ್ಕೆ ಮಂಗಳೂರಿನಲ್ಲಿ ಇಬ್ಬರು ರಿಕ್ಷಾ ಚಾಲಕರು ಸಾವನ್ನಪ್ಪಿರುವ ಪ್ರಕರಣ ಇನ್ನೂ ಹಸಿಯಾಗಿದ್ದಾಗಲೇ ಬೆಳ್ತಂಗಡಿಯಲ್ಲಿ ಯುವತಿಯೊಬ್ಬಳು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ.
ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ (20) ಮೃತಪಟ್ಟ ಯುವತಿ.

ಮನೆಯ ಬಳಿ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದ ಪ್ರತೀಕ್ಷಾ ಶೆಟ್ಟಿಗೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿದೆ. ಈ ವೇಳೆ ವಿದ್ಯುತ್ ಶಾಕ್ಗೊಳಗಾಗಿ ಮೃತಪಟ್ಟಿದ್ದಾಳೆ. ವಿದ್ಯುತ್ ಕಂಬಕ್ಕೆ ಕೊಡುವ ಸ್ಟೇವೈಯರ್ ಮೂಲಕ ವಿದ್ಯುತ್ ನೀರಿಗೆ ಪ್ರವಾಹಿಸಿದ ಕಾರಣ ಆಕೆ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆಕೆಯ ರಕ್ಷಣೆಗೆ ತಂದೆ ಗಣೇಶ್ ಶೆಟ್ಟಿ ಧಾವಿಸಿದ್ದು, ಅವರಿಗೂ ಶಾಕ್ ಆಗಿದೆ. ತಕ್ಷಣ ಪ್ರತೀಕ್ಷಾ ಶೆಟ್ಟಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ಮೃತಪಟ್ಟ ಯುವತಿ ಕೊಕ್ಕಡ ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದಳು.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಸ್ಕಾಂ ತಕ್ಷಣ ಯುವತಿಯ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಕೊಡಬೇಕೆಂದು ಸ್ಪೀಕರ್ ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಬೆಳ್ತಂಗಡಿ ಶಾಸಕ ಸ್ಥಳಕ್ಕೆ ಭೇಟಿ ನೀಡಿ ಗರಿಷ್ಠ ಮೊತ್ತ 25 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.
