ಉಡುಪಿ : ಜಿಲ್ಲೆಯಲ್ಲಿ ತಾಂತ್ರಿಕ ಕಾರಣದಿಂದ ಬಿಎಸ್ಎನ್ಎಲ್ ನೆಟ್ವರ್ಕ್ 4ಜಿಗೆ ಅಪ್ಡೇಟ್ ಆಗದ ಸೈಟ್ಗಳನ್ನು ಆದಷ್ಟು ಶೀಘ್ರ ಅಪ್ಡೇಟ್ ಮಾಡಿ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿ.ಪಂ. ಕಚೇರಿಯ ಸಭಾಂಗಣದಲ್ಲಿ ನಡೆದ ಬಿಎಸ್ಎನ್ಎಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಟೆಲಿಕಾಂ ಸಂಸ್ಥೆಗಳು ಈಗಾಗಲೇ 5ಜಿ ಸೇವೆ ಒದಗಿಸುತ್ತಿವೆ. ಸರಕಾರಿ ಸಂಸ್ಥೆಯಾಗಿ ಬಿಎಸ್ಎನ್ಎಲ್ ಇನ್ನೂ 4ಜಿ ಸೇವೆಯನ್ನೇ ಸರಿಯಾಗಿ ನೀಡದಿದ್ದರೆ ಹೇಗೆ? ಆದಷ್ಟು ಬೇಗ ಈ ಕಾರ್ಯ ಪೂರೈಸಬೇಕು. ಎ.11 ಅಥವಾ 12ರೊಳಗೆ ಎಲ್ಲ ಸಮಸ್ಯೆಯನ್ನು ಸರಿಪಡಿಸಿ, ವರದಿ ಒಪ್ಪಿಸಬೇಕು ಎಂದರು.
41 ಸೈಟ್ಗಳಲ್ಲಿ 4ಜಿ ಸ್ಯಾಚುರೇಶನ್ ಕೈಗೊಂಡಿದ್ದು, ಅದರಲ್ಲಿ 32 ಈಗಾಗಲೇ ಪೂರ್ಣಗೊಂಡಿದೆ. 11ಕಡೆ ವಿವಿಧ ಸಮಸ್ಯೆಯಿಂದ ಇದು ಸಾಧ್ಯವಾಗಿಲ್ಲ. ಅರಣ್ಯಭೂಮಿ ಹಾಗೂ ಮೆಸ್ಕಾಂ ಅನುಮತಿ ಆಗದ ಕಡೆಗಳಲ್ಲಿ ಈ ಸಮಸ್ಯೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾದ್ಯಂತ 196 ಬಿಎಸ್ಎನ್ಎಲ್ ಟವರ್ಗಳಿದ್ದು ಇದರಲ್ಲಿ ಸುಮಾರು 111 ಟವರ್ಗಳಿಗೆ 4ಜಿ ಸೈಟ್ ಅಳವಡಿಕೆ ಬಾಕಿಯಿದೆ. ಈ ಪ್ರಕ್ರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಗ್ರಾಮೀಣ ಭಾಗದ ನೆಟ್ವರ್ಕ್ ಸಮಸ್ಯೆಗೆ ಶೀಘ್ರವೇ ಮುಕ್ತಿ ನೀಡಬೇಕು ಎಂದು ಸಂಸದರು ಸೂಚಿಸಿದರು.
ಬಿಎಸ್ಎನ್ಎಲ್ ಟವರ್ಗಳ ನಿರ್ವಹಣೆ ಚೆನ್ನಾಗಿ ಆಗಬೇಕು. ಬ್ಯಾಟರಿ ಸಮಸ್ಯೆ ಇರುವಲ್ಲಿ ಕೂಡಲೇ ಸರಿಪಡಿಸಿ. ಬ್ಯಾಟರಿ ಕಳ್ಳತನ ಆದಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾದೀತು ಎಂದು ಎಚ್ಚರಿಸಿದರು.