ಅಜೆಕಾರು : ಅಜೆಕಾರು ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದವರನ್ನು ವಂಚಿಸಿ ಅವರ ಕಾರ್ಡ್ ಬದಲಿಸಿ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಅಜೆಕಾರು ಪೊಲೀಸರು ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್ ಚೆಕ್ಪೋಸ್ಟ್ ಬಳಿ ಬಂಧಿಸಿದ್ದಾರೆ.

ಮಹಾರಾಷ್ಟ್ರದ ಶ್ರವಣ್ ಸತೀಶ ಮಿನಜಗಿ (27), ಪ್ರದೀಪ ಮಾರುತಿ ಇಂಗ್ಲೆ (27) ಹಾಗೂ ಕಿರಣ್ ಬಾಲು ಚೌಹಾಣ್ (28) ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳಿಂದ ಸ್ವಿಫ್ಟ್ ಕಾರು, 70,000 ರೂ. ಹಣ, 3 ಮೊಬೈಲ್ ಫೋನ್ ಹಾಗೂ ವಿವಿಧ ಬ್ಯಾಂಕ್ಗಳ 52 ಎಟಿಎಂ ಕಾರ್ಡ್ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಎಟಿಎಂ ಕಾರ್ಡ್ ವಂಚನೆಗೆ ಸಂಬಂದಿಸಿದಂತೆ 70ಕ್ಕೂ ಹೆಚ್ಚು ಪ್ರಕರಣ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದೆ. ಆರೋಪಿಗಳು ಕುಖ್ಯಾತ ಅಂತಾರಾಜ್ಯ ಕಳ್ಳರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
