ಉಡುಪಿ : ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾಕಷ್ಟು ಜನಾಕ್ರೋಶಕ್ಕೂ ಕಾರಣವಾಗಿರುವ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮಾರ್ಚ್ 31ರೊಳಗೆ ಪೂರ್ಣ ಗೊಳಿಸುವ ವಿಶ್ವಾಸವನ್ನು ರೈಲ್ವೆ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಇರುವ ಇಂದ್ರಾಳಿಯ ರೈಲ್ವೇ ಮೇಲ್ಲೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರೊಂದಿಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಈ ವಿಷಯ ತಿಳಿಸಿದರು.
ರೈಲ್ವೆಯ ಕಾರ್ಯನಿರ್ವಾಹಕ ಇಂಜಿಯರ್ ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕಾಮಗಾರಿಯ ಪ್ರಗತಿಯ ಕುರಿತು ಚರ್ಚಿಸಿದ್ದು, ಯೋಜಿತ ರೀತಿಯಲ್ಲಿ ಎಲ್ಲಾ ಕಾಮಗಾರಿಯನ್ನು ವಿಳಂಬಕ್ಕೆ ಆಸ್ಪದ ನೀಡದೇ ನಡೆದರೆ ಮಾರ್ಚ್ 31ರೊಳಗೆ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಗರ್ಡರ್ಗಳ ಜೋಡಣೆ ಹಾಗೂ ವೆಲ್ಡಿಂಗ್ ಕಾಮಗಾರಿ ಮುಗಿದಿದೆ. ರೈಲ್ವೆಯಿಂದ ಬಂದಿರುವ ಇಂಜಿನಿಯರ್ಗಳು ಪ್ರತಿ ಜಾಯಿಂಟ್ನ್ನು ಪರಿಶೀಲಿಸುತ್ತಿದ್ದಾರೆ. ಇದು ಇನ್ನು ಮೂರು ದಿನಗಳಲ್ಲಿ ಮುಗಿಯಬಹುದು. ಆ ಬಳಿಕ ಅವರು ಕಾಮಗಾರಿಯ ಬಗ್ಗೆ ವಿಸ್ತ್ರತವಾದ ವರದಿಯನ್ನು ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ನೀಡಲಿದ್ದಾರೆ. ಅವರು ಬಂದು ಪರಿಶೀಲಿಸಿ ಓಕೆ ಮಾಡಿದ ನಂತರ ಕಬ್ಬಿಣದ ಸೇತುವೆಯನ್ನು ಕೂರಿಸುವ ಕಾಮಗಾರಿ ನಡೆಯಲಿದೆ ಎಂದರು.