ಉಡುಪಿ : ಜಮ್ಮು – ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಕೃತ್ಯ ಖಂಡನೀಯ ಮತ್ತು ಹೇಯ. ಈ ದಾಳಿಯಲ್ಲಿ ಇಬ್ಬರು ಕರ್ನಾಟಕದವರು ಸೇರಿದಂತೆ 28 ಜನ ಪ್ರವಾಸಿಗರು ಬಲಿಯಾಗಿರುವುದು ಅತೀವ ನೋವು ತಂದಿದೆ. ಉಗ್ರರ ಹೇಯ ಕೃತ್ಯವನ್ನು ಉಡುಪಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಕಟುವಾಗಿ ಖಂಡಿಸಿದ್ದಾರೆ.

ಪಹಲ್ಗಾಮ್ನಲ್ಲಿ ನಡೆದಿರುವುದು ಕೇವಲ ಉಗ್ರರ ದಾಳಿಯಲ್ಲ. ಅದು ಮನುಷ್ಯತ್ವದ ವಿರುದ್ಧದ ದಾಳಿ, ಈ ನೆಲದ ಅಸ್ಮಿತೆಯ ಮೇಲಿನ ದಾಳಿ. ಈ ದಾಳಿಯ ಹಿಂದಿನ ಶಕ್ತಿಗಳನ್ನು ಭಾರತೀಯರಾದ ನಾವು ಒಗ್ಗಟ್ಟಾಗಿ ಹುಟ್ಟಡಗಿಸಲೇಬೇಕಾಗಿದೆ.
ಪಾಕಿಸ್ತಾನದ ಕೈವಾಡವಿಲ್ಲದೆ, ಆ ದೇಶದ ಗುಪ್ತಚರ ಏಜೇನ್ಸಿಗಳ ಪಾತ್ರವಿಲ್ಲದೆ ಪಹಲ್ಗಾಮ್ನಲ್ಲಿ ಇಂತಹದ್ದೊಂದು ವ್ಯವಸ್ಥಿತ ದಾಳಿ ನಡೆಯುವ ಸಾಧ್ಯತೆಯೇ ಇಲ್ಲ. ಜಮ್ಮು – ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ, ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಕೇಂದ್ರ ಸರ್ಕಾರ ಪೊಳ್ಳು ಹೇಳಿಕೆ ನೀಡುವ ಬದಲು, ಇಂತಹ ಅಮಾನುಷ ಘಟನೆಗಳು ಸಂಭವಿಸದಂತೆ ಮತ್ತು ಅಮಾಯಕ ಭಾರತೀಯರು ಈ ರೀತಿ ಪ್ರಾಣ ಕಳೆದುಕೊಳ್ಳದಂತೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಇನ್ನಾದರೂ ಸುಳ್ಳು ಹೇಳುವ ಚಾಳಿ ಬಿಡಬೇಕಿದೆ. ಉಡುಪಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಗ್ರಹಿಸಿದ್ದಾರೆ.