ಬಂಟ್ವಾಳ : ಅಪ್ರಾಪ್ತ ವಯಸ್ಸಿನ ಮಗನೋರ್ವ ಸ್ಕೂಟರ್ ಓಡಿಸಿ ತಂದೆಗೆ ಸಂಕಷ್ಟ ತಂದಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬಾಲಕ ರಸ್ತೆ ನಿಯಮ ಉಲ್ಲಂಘಿಸಿದ್ದಕ್ಕೆ ನ್ಯಾಯಾಲಯ ಆತನ ತಂದೆಗೆ 26 ಸಾವಿರ ದಂಡ ವಿಧಿಸಿದೆ.
ಎರಡು ದಿನಗಳ ಹಿಂದೆ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಎಸ್.ಐ. ಸುತೇಶ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಬಾಲಕನೋರ್ವ ಪರ್ಲಿಯಾ ಸಮೀಪ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿರುವುದು ಕಂಡುಬಂದಿದೆ. ಆಗ ಆತನನ್ನು ನಿಲ್ಲಿಸಿ ವಿಚಾರಿಸಿದಾಗ ಅಪ್ರಾಪ್ತ ವಯಸ್ಕನಾಗಿದ್ದು, ಲೈಸನ್ಸ್ ಇಲ್ಲದಿರುವುದು ಗೊತ್ತಾಗಿದೆ.
ಲೈಸನ್ಸ್ ಹೊಂದಿರದ, ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಸ್ಕೂಟರ್ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪರಿಣಾಮ ಪ್ರಕರಣ ದಾಖಲಾಗಿದ್ದು, ಬಳಿಕ ಬಾಲಕನ ತಂದೆ, ಸಮೀರ್ ಎಂಬವರಿಗೆ ಬಂಟ್ವಾಳ ಜೆಎಂಎಫ್ಸಿ ಕೋರ್ಟಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ನಿಯಮ ಉಲ್ಲಂಘಿಸಿದ್ದಕ್ಕಾಗಿ 26 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.