ಉಡುಪಿ : ಪತ್ನಿಗೆ ಜೀವನಾಂಶ ನೀಡದೆ ತಪ್ಪಿಸಿಕೊಳ್ಳುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿಯ ಪಿಂಚಣಿ ಹಣದಲ್ಲಿ ಜೀವನಾಂಶ ನೀಡಲು ನ್ಯಾಯಾಲಯ ಆದೇಶಿಸಿದೆ.

ನಿವೃತ್ತ ರೈಲ್ವೇ ಪೊಲೀಸ್ ಅಧಿಕಾರಿ ಜಯ ಭಂಡಾರಿ ಅವರು ಅವರ ಪತ್ನಿ ರಮಣಿ ಭಂಡಾರಿ ಹಾಗೂ ಅವರ ಮಗಳನ್ನು 2022ರಲ್ಲಿ ಹಿಂಸೆ ನೀಡಿ ಮನೆಯ ವಿದ್ಯುತ್ ಸಂಪರ್ಕವನ್ನು ಶಾಶ್ವತ ನಿಲುಗಡೆ ಮಾಡಿ ಅವರನ್ನು ಮನೆಯಿಂದ ಹೊರಗೆ ಹಾಕಿದಲ್ಲದೆ ಮನೆಯನ್ನು ತಮ್ಮನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಈ ಬಗ್ಗೆ ರಮಣಿ ಭಂಡಾರಿ ಹಾಗೂ ಅವರ ಮಗಳು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದು, ನ್ಯಾಯಾಲಯವು ಅರ್ಜಿಯೊಂದಿಗಿದ್ದ ಮಧ್ಯಾಂತರ ಜೀವನಾಂಶ ಅರ್ಜಿಯನ್ನು ಪುರಸ್ಕರಿಸಿ ತಿಂಗಳಿಗೆ 8 ಸಾವಿರ ರೂ. ಜೀವನಾಂಶ ನೀಡಬೇಕೆಂದು ಅದೇಶಿಸಿತ್ತು.
ನ್ಯಾಯಾಲಯದ ಆದೇಶವಿದ್ದರೂ ಪತ್ನಿಗೆ ಜೀವನಾಂಶ ನೀಡದೆ ಜಯ ಭಂಡಾರಿ ಆದೇಶವನ್ನು ಉಲ್ಲಂಘಿಸಿದ್ದರು. ಈ ಬಗ್ಗೆ ಅರ್ಜಿದಾರೆ ರಮಣಿ ಭಂಡಾರಿ ಪತಿಯ ಪಿಂಚಣಿ ಲಗತ್ತು ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪುರಸ್ಕರಿಸಿ ಪಿಂಚಣಿ ಲಗತ್ತಿಗೆ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ವಿನಾಯಕ ವಾಂಕಡೆ ಆದೇಶಿಸಿದ್ದಾರೆ. ಅರ್ಜಿದಾರ ಪರ ನ್ಯಾಯವಾದಿ ಗುರುರಾಜ್ ಜಿ.ಎಸ್. ಮಟ್ಟು ವಾದಿಸಿದ್ದರು.