ಉಡುಪಿ : ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸುನಿಲ್ ಕುಮಾರ್ ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಎಂ ತಕ್ಷಣ ರಾಜೀನಾಮೆ ಕೊಡಬೇಕಾಗಿತ್ತು. ಸಿದ್ದರಾಮಯ್ಯ ಭಂಡತನವನ್ನು ಬಿಡಬೇಕು. ನೈತಿಕತೆಯ ಸಿದ್ಧಾಂತ ಹೇಳುವ ಸಿದ್ದರಾಮಯ್ಯ ಇನ್ನಾದರೂ ರಾಜೀನಾಮೆ ಕೊಡಬೇಕು. ಬಳಿಕ ತನಿಖೆಯನ್ನು ಎದುರಿಸಬೇಕು ಎಂದು ಹೇಳಿದ್ದಾರೆ.
ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕಾರದಲ್ಲಿ ಇರಬಾರದು ಎಂದ ಸುನಿಲ್ ಕುಮಾರ್, ರಾಜ್ಯಪಾಲರ ನಡೆಯನ್ನು ಕಾಂಗ್ರೆಸ್ ಈಗ ಟೀಕೆ ಮಾಡುತ್ತಿದೆ. ಆದರೆ ರಾಜ್ಯಪಾಲರಿಂದ ಭಾಷಣ ಮಾಡಿಸಿ ಕೇಂದ್ರವನ್ನು ಟೀಕೆ ಮಾಡಿದಾಗ ಪ್ರಶಂಸೆ ಮಾಡಿದ್ದರು.
ರಾಜ್ಯಪಾಲರು ತಮಗೆ ಬೇಕಾದಾಗ ಒಳ್ಳೆಯವರು, ಬೇಡದಿದ್ದಾಗ ಕೆಟ್ಟವರಾಗುತ್ತಾರಾ? ಮೂಡ ಹಗರಣಕ್ಕೆ ಸಂಬಂಧಪಟ್ಟಂತೆ ಮೂರು ಮಂದಿ ಖಾಸಗಿ ವ್ಯಕ್ತಿಗಳು ದೂರು ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಬಿಜೆಪಿ ದೂರು ಕೊಟ್ಟಿಲ್ಲ, ಸಾಮಾಜಿಕ ಕಾರ್ಯಕರ್ತರು ಕೊಟ್ಟಿದ್ದಾರೆ. ರಾಜ್ಯಪಾಲರು ವಿವರಣೆ ಕೇಳಿದ್ದರೂ ಆ ಸಂದರ್ಭ ಮುಖ್ಯಮಂತ್ರಿಗಳು ಅಥವಾ ಸರ್ಕಾರ ವಿವರಣೆ ಕೊಟ್ಟಿಲ್ಲ. ಕರ್ನಾಟಕದ ರಾಜಕೀಯಕ್ಕೆ ಇತಿಹಾಸ ಮತ್ತು ಪರಂಪರೆ ಇದೆ. ಒಂದು ಕ್ಷಣ ಕೂಡ ಅವರು ಆ ಸ್ಥಾನದಲ್ಲಿ ಇರಕೂಡದು ಎಂದು ಒತ್ತಾಯ ಮಾಡಿದ್ದಾರೆ.