ಉಡುಪಿ : ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವ ಸಂವಿಧಾನದ ಮೂಲಭೂತ ಆಶಯವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತದ್ದು ಬಹಳ ಆತಂಕಕಾರಿಯಾಗಿದೆ. ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವಂಥದ್ದು ಸರ್ಕಾರದ ಕರ್ತವ್ಯವಾಗಿದೆ ಹಾಗಾದಾಗ ಅಂಬೇಡ್ಕರ್ ಜಯಂತಿ ಅರ್ಥಪೂರ್ಣವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಜಯನ್ ಮಲ್ಪೆ ನುಡಿದರು.
ಅವರು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಇತಿಹಾಸ ವಿಭಾಗ ಎಸ್ಸಿ-ಎಸ್ಟಿ ಸೆಲ್ ಮತ್ತು ಲೈಬ್ರೆರಿ ವಿಭಾಗದವರು ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಸ್ಪರ್ಧೆ ರಸಪ್ರಶ್ನೆ ಸ್ಪರ್ಧೆ ಮತ್ತು ಅಂಬೇಡ್ಕರ್ ಜೀವನದ ಕುರಿತು ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಲ್ವ ಅವರು ಅಂಬೇಡ್ಕರ್ರವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಐಕ್ಯೂ ಎಸಿ ಸಂಚಾಲಕರಾದ ಶಾಲೆಟ್ ಮಥಾಯಸ್, ಡಾ ಜಯರಾಮ್ ಶೆಟ್ಟಿಗಾರ್, ಕ್ಲಾರಾ ಲೋಬೊ, ರೇಖಾ, ವಿದ್ಯಾರ್ಥಿ ಸಂಘಟಕರಾದ ವಸೀಫ ಮತ್ತು ಧನ್ಯಾ ಉಪಸ್ಥಿತರಿದ್ದರು.
ಸಿಂಚನ ಕಾರ್ಯಕ್ರಮ ನಿರೂಪಿಸಿ, ಭೂಮಿಕ ಸ್ವಾಗತಿಸಿ ಶ್ರದ್ಧ ಧನ್ಯವಾದ ಸಮರ್ಪಿಸಿದರು.