ಮಂಗಳೂರು : ನಿಡ್ಡೋಡಿಯ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಆರೋಪಿ ಶೇಖರ ಶೆಟ್ಟಿ ಅವರನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
2016ರ ಜ. 12ರಂದು ನಿಡ್ಡೋಡಿಯ ಯಮುಲ ಮನೆ ನಿವಾಸಿ ರೇವತಿ ನಿಡ್ಡೋಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ಮರಳಿ ಬಂದಿರಲಿಲ್ಲ. ಅವರ ಅಣ್ಣ ತಿಮ್ಮಪ್ಪ ಮಡಿವಾಳ ದೂರಿನಂತೆ ಮೂಡುಬಿದಿರೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಸ್ಥಳೀಯ ಶುಂಠಿಲ ಪದವಿನ ನಿವಾಸಿಯಾದ ಶೇಖರ ಶೆಟ್ಟಿ ಅವರ ಮೇಲೆ ಸಂಶಯವಿರುವುದಾಗಿ ತಿಳಿಸಿದ್ದರು. ಶೇಖರ ಅವರನ್ನು ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಮಧ್ಯೆ ಶೇಖರ ಶೆಟ್ಟಿ ಮನೆಯನ್ನು ಬಿಟ್ಟು ಹೋಗಿದ್ದು ಈ ಬಗ್ಗೆ ಅವರ ಪತ್ನಿ ದಯಾವತಿಯವರು ಶೇಖರ ಶೆಟ್ಟಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಅನಂತರ ಶೇಖರ ಶೆಟ್ಟಿ 2016 ಜ. 18ರಂದು ಠಾಣೆಗೆ ಹಾಜರಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು. ರೇವತಿ ಬೀಡಿ ಬ್ರಾಂಚಿಗೆಂದು ಶುಂಠಿಲ ಪದವಿಗೆ ಬರುತ್ತಿರುವಾಗ ಪರಿಚಯವಾಗಿದ್ದು ಅನ್ಯೋನ್ಯವಾಗಿದ್ದರು. ಶೇಖರ್ಗೆ ಹಣದ ಸಮಸ್ಯೆಯಾದಾಗ ರೇವತಿಯ ಬಂಗಾರವನ್ನು ಪಡೆದು ಅಡವಿಟ್ಟು ಸಾಲ ಪಡೆಯುತ್ತಿದ್ದ. ಅಂತೆಯೇ 2015ರ ನವೆಂಬರ್ನಲ್ಲಿ ರೇವತಿ ಸರವನ್ನು ನೀಡಿದ್ದು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದನು. ಆ ಚಿನ್ನದ ಸರವನ್ನು ಬಿಡಿಸಿಕೊಡುವಂತೆ ಆಗಾಗ ಒತ್ತಡ ಹೇರಿದ್ದರಿಂದ ರೇವತಿಯನ್ನು 2016ರ ಜ. 12ರಂದು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೋಲಿಸರನ್ನು ಪಡ್ಡಗುರಿಗೆ ಕರೆದುಕೊಂಡು ಹೋಗಿ ರೇವತಿಯ ಶವವನ್ನು ತೋರಿಸಿದ್ದ.
ಈ ಪ್ರಕರಣದಲ್ಲಿ ಆರೋಪಿ ಪರ ವಕೀಲರು ವಾದ ಮಂಡಿಸಿದ್ದು, ಡಿಎನ್ಎ ವರದಿಯಲ್ಲಿ ತನಿಖಾಧಿಕಾರಿಯವರು ಕಳುಹಿಸಿಕೊಟ್ಟಿದ್ದ ರೇವತಿಯ ಶವದ ಜೈವಿಕ ಅಂಶಗಳು ಪರೀಕ್ಷೆಗೆ ಸಮರ್ಪಕವಾಗಿರಲಿಲ್ಲ ಎಂಬುದಾಗಿ ವರದಿ ನೀಡಿದ್ದವು.
ಈ ಕಾರಣದಿಂದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಅವರು ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಯನ್ನು ಖುಲಾಸೆ ಗೊಳಿಸಿದ್ದಾರೆ.