ಮಂಗಳೂರು : ನಗರದ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ಪಿಎಲ್ ಕಂಪೆನಿ ಸ್ಥಾಪನೆಗೆ ಜಮೀನು ನೀಡಿ ಭೂಮಿ ಕಳೆದುಕೊಂಡು ಉದ್ಯೋಗ ಪಡೆದಿದ್ದ 115 ಮಂದಿಗೆ ಜಿಎಂಪಿಎಲ್ (ಗೈಲ್ ಇಂಡಿಯಾ) ಕಂಪೆನಿಯಲ್ಲಿ ಮತ್ತೆ ಉದ್ಯೋಗ ಮುಂದುವರಿಸುವುದಕ್ಕೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸೂಚನೆ ಮೇರೆಗೆ ಜಿಎಂಪಿಎಲ್ ಕಂಪೆನಿ ಇದೀಗ ಒಪ್ಪಿಗೆ ನೀಡಿದೆ. ಈ ಮೂಲಕ ಬಹುದಿನಗಳ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಗಂಭೀರ ಸಮಸ್ಯೆಯನ್ನು ದ.ಕ. ಸಂಸದ ಬ್ರಿಜೇಶ್ ಚೌಟ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವಂತೆ ಕಳೆದ ತಿಂಗಳು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಬ್ರಿಜೇಶ್ ಚೌಟ ಮನವಿ ಮಾಡಿದ್ದರು. ಈ ಮನವಿಯ ಮೇರೆಗೆ ಅವರು, ಪೆಟ್ರೋಲಿಯಂ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್, ಗೈಲ್ ಸಿಎಂಡಿ ಸಂದೀಪ್ ಗುಪ್ತಾ ಹಾಗೂ ಜಿಎಂಪಿಎಲ್ ಅಧ್ಯಕ್ಷ ಆಯುಷ್ ಗುಪ್ತಾರೊಂದಿಗೆ ಸಭೆ ನಡೆಸಿದ್ದರು.

ಇದೀಗ ಬಗ್ಗೆ ಬ್ರಿಜೇಶ್ ಚೌಟ ಅವರಿಗೆ ಪತ್ರ ಬರೆದಿರುವ ಗೇಲ್ ಇಂಡಿಯಾದ ನಿರ್ದೇಶಕ ಹಾಗೂ ಜಿಎಂಪಿಎಲ್ ಅಧ್ಯಕ್ಷ ಆಯುಷ್ ಗುಪ್ತಾ “ಜಿಎಂಪಿಎಲ್ಗೆ ಜೆಬಿಎಫ್ಪಿಎಲ್ ಪಿಡಿಎಫ್ ಸಮಸ್ಯೆ ಬಗ್ಗೆ ಮನವಿ ಬಂದಿದ್ದು ಅದನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುತ್ತಿದ್ದು, ಸೆ.30ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ” ಭರವಸೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಮತ್ತೆ ಉದ್ಯೋಗ ಕಲ್ಪಿಸಿ ಕೊಟ್ಟ ಸಂಸದ ಬ್ರಿಜೇಶ್ ಚೌಟರನ್ನು ಸಂತ್ರಸ್ತರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.