ಉಡುಪಿ : ಶ್ರೀ ದುರ್ಗಾಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜು ಮಂದಾರ್ತಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಮಾನ್ಯ ಎಸ್ ಪೂಜಾರಿ ಈ ಬಾರಿಯ ಪರೀಕ್ಷೆಯಲ್ಲಿ ಶೇಕಡಾ 95.16% ಪಡೆದಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ಮಾನ್ಯ, ತಾಯಿಯ ಶ್ರಮಕ್ಕೆ ಇಂದು ಬೆಲೆ ತಂದು ಕೊಟ್ಟಿದ್ದಾಳೆ. ಮಾನ್ಯ ತಾಯಿ ಗೇರು ಬೀಜ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದು, ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದಾರೆ. ಸದ್ಯ ಮಾನ್ಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾಯಿ ವಿನೋದ ಹಾಗೂ ತಾನು ಕಲಿತ ಶಿಕ್ಷಣ ಸಂಸ್ಥೆಗೆ ಹೆಮ್ಮೆ ಪಡುವಂತೆ ಮಾಡಿದ್ದಾಳೆ.
ಯಾವುದೇ ಟ್ಯೂಷನ್ಗೆ ಹೋಗದೇ ಕಾಲೇಜು ಪ್ರಾಧ್ಯಾಪಕರ ಸಹಾಯ ಪಡೆದು, ತಾನೇ ಹಗಲುಇರಳು ಶ್ರಮವಹಿಸಿ ಓದಿ ಉತ್ತಮ ಅಂಕ ಗಳಿಸಿರುವ ಮಾನ್ಯ ಸದ್ಯ ಮುಂದಿನ ಶಿಕ್ಷಣಕ್ಕಾಗಿ ಸಿ.ಎ(Chartered Accountant) ಮಾಡಲು ಹೆಜ್ಜೆ ಇಟ್ಟಿದ್ದಾಳೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಮ್ಮ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಮಾನ್ಯಳ ಶ್ರಮಕ್ಕೆ ಶ್ರೀ ದುರ್ಗ ಪರಮೇಶ್ವರಿ ಟೆಂಪಲ್ ಪದವಿ ಪೂರ್ವ ಕಾಲೇಜು ಮಂದಾರ್ತಿಯ ಪ್ರಾಂಶುಪಾಲರು, ಭೋದಕ ಹಾಗೂ ಭೋದಕೇತರ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.