ಉಡುಪಿ : ಎಸ್ಡಿಪಿಐ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಟೌನ್ ಹಾಲ್ನಲ್ಲಿ ಅದ್ದೂರಿ ಇಫ್ತಾರ್ ಸಮಾರಂಭವನ್ನು ಆಯೋಜಿಸಲಾಯಿತು. ಸಮಾರಂಭದಲ್ಲಿ ಜಿಲ್ಲೆಯ ಪ್ರಮುಖ ವ್ಯಕ್ತಿಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರು, ವಕೀಲರು ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಸ್ಲಿಂ ಸಮುದಾಯದ ಯಾವುದೇ ಸಲಹೆ ಅಥವಾ ಒಪ್ಪಿಗೆಯನ್ನು ಪಡೆಯದೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಬಲವಂತವಾಗಿ ಜಾರಿಗೆ ತರುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದರು. ಭಾರತದಲ್ಲಿ 20 ಕೋಟಿ ಮುಸ್ಲಿಮರನ್ನು ಪ್ರತಿನಿಧಿಸುವ ಯಾವುದೇ ಮುಸ್ಲಿಂ ರಾಜಕೀಯ ಅಥವಾ ಧಾರ್ಮಿಕ ನಾಯಕರು ವಕ್ಫ್ ಅಧಿನಿಯಮದಲ್ಲಿ ತಿದ್ದುಪಡಿ ಮಾಡಲು ಒತ್ತಾಯಿಸಿಲ್ಲ. ಇಂತಹ ಏಕಪಕ್ಷೀಯ ಕ್ರಮಗಳು ಸಂವಿಧಾನಾತ್ಮಕ ಮೌಲ್ಯಗಳಿಗೆ ಮತ್ತು ಜನರ ಕಲ್ಯಾಣಕ್ಕೆ ವಿರುದ್ಧವಾಗಿವೆ ಎಂದು ಅವರು ಹೇಳಿದರು. ಎಸ್ಡಿಪಿಐ ಉಡುಪಿ ಜಿಲ್ಲಾ ಅಧ್ಯಕ್ಷ ಅಸೀಫ್ ಕೋಟೇಶ್ವರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಧಾನಸಭಾ ಅಧ್ಯಕ್ಷ ಆಶ್ರಫ್ ಬಾವಾ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅತಾವುಲ್ಲ ಜೋಕಟ್ಟೆ, ಶಾಹಿದ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಎಸ್. ರಜಾಕ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.