ಉಡುಪಿ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಜ್ರಾಭರಣಗಳು ಕಳವಾದ ಘಟನೆ ಮತ್ಸ್ಯಗಂಧ ರೈಲಿನಲ್ಲಿ ಸಂಭವಿಸಿದೆ.
ಮಹಾರಾಷ್ಟ್ರದ ವಿಜಯ ಎಚ್. ರಾವ್ ಅವರು ಮತ್ಸ್ಯಗಂಧ ರೈಲಿನಲ್ಲಿ ಮುಂಬಯಿಯಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ತಮ್ಮ ಸೂಟ್ಕೇಸ್ ಮತ್ತು ಹ್ಯಾಂಡ್ ಬ್ಯಾಗ್ಗಳನ್ನು ಸೀಟ್ನ ಕೆಳಗಡೆ ಇಟ್ಟಿದ್ದು, ಒಡೆವೆಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ಅವರ ತಲೆಯ ಬಳಿ ಇರಿಸಿ ರಾತ್ರಿ ರೈಲಿನಲ್ಲಿ ಮಲಗಿದ್ದರು. ಮರುದಿನ ಬೆಳಗ್ಗೆ ರೈಲು ಇಂದ್ರಾಳಿ ರೈಲು ನಿಲ್ದಾಣಕ್ಕೆ ಅಗಮಿಸಿದ ವೇಳೆ ಅವರಿಗೆ ಎಚ್ಚರವಾಗಿದ್ದು, ಅವರ ತಲೆಯ ಬಳಿ ಇಟ್ಟಿದ್ದ 138 ಗ್ರಾಂ ತೂಕದ ಬಂಗಾರ ಹಾಗೂ ವಜ್ರದ ಆಭರಣಗಳು ಮತ್ತು 8 ಸಾವಿರ ರೂ. ನಗದು ಇರುವ ವ್ಯಾನಿಟಿ ಬ್ಯಾಗ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.