Udupi
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ವಿರುದ್ದ ಸುಳ್ಳು ಸುದ್ದಿ – ದೂರು ದಾಖಲು
ಉಡುಪಿ : ನೈಜ ವಿಷಯ ಮರೆಮಾಚಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಉಡುಪಿ ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಅವರು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದಾರೆ.

2024ರ ಡಿಸೆಂಬರ್ 24ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಉಡುಪಿಯ ಶಾಸಕರು ಮಸೀದಿ, ದೇವಸ್ಥಾನ ಹಾಗು ಚರ್ಚುಗಳ ವಿಷಯದ ಬಗ್ಗೆ ಚರ್ಚೆಗೆ ತೆಗೆದುಕೊಂಡಾಗ ನಾನು ಯಾವುದೇ ಧರ್ಮಕ್ಕೆ ಅಥವಾ ಯಾವುದೇ ಸಮುದಾಯದ ವಿರುದ್ಧ ಅಪಮಾನ ಮಾಡುವ ರೀತಿ ಮಾತನಾಡಿರುವುದಿಲ್ಲ. ಧಾರ್ಮಿಕ ಸಂಸ್ಥೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸರಿಯಾಗಿ ಯೋಚಿಸಿ ಮುಂದುವರಿಯಬೇಕು ಎಂದು ಹೇಳಿರುವುದಾಗಿ ತಿಳಿಸಿದ್ದು, ಆದರೆ ಒಬ್ಬ ವ್ಯಕ್ತಿ ನಾನು ಹಿಂದೂ ಧರ್ಮಕ್ಕೆ ಅವಹೇಳನ ಮಾಡಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುತ್ತಾನೆ ಎಂದು ಉಡುಪಿ ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಿ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಮಾಡಿರುತ್ತಾನೆ. ಹಾಗೆಯೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಆ ಮೂಲಕ ಪ್ರಯತ್ನಿಸಿರುತ್ತಾನೆ. ಆದ್ದರಿಂದ ಈ ಸುಳ್ಳು ಸುದ್ದಿ ಹಬ್ಬಿಸುವ ಆ ವ್ಯಕ್ತಿಗೆ ಎಚ್ಚರಿಕೆ ನೀಡಿ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಉಡುಪಿ : ಇನ್ಸ್ಟಾಗ್ರಾಂ ಖಾತೆಗೆ ಬಂದ ವರ್ಕ್ ಫ್ರಮ್ ಹೋಮ್ ಲಿಂಕ್ ಒತ್ತಿ ಯುವತಿಯೋರ್ವಳು ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.
ಶಿವಳ್ಳಿ ಗ್ರಾಮದ ಸಪ್ನಾ (28) ಅವರ ಇನ್ಸ್ಟಾಗ್ರಾಂ ಖಾತೆಗೆ ವರ್ಕ್ ಫ್ರಮ್ ಹೋಮ್ ಎಂದು ಲಿಂಕ್ ಬಂದಿದ್ದು, ಅದನ್ನವರು ಓಪನ್ ಮಾಡಿದ್ದಾರೆ. ಅದರ ಪ್ಲಾಟ್ ಫಾರ್ಮ್ನಲ್ಲಿ ಆರಂಭದಲ್ಲಿ 200 ರೂ. ಹೂಡಿಕೆ ಮಾಡಲು ಹೇಳಿದ್ದರು. ಅದಕ್ಕೆ 50 ರೂ. ಕಮಿಷನ್ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್ ಬರುವುದಾಗಿ ನಂಬಿ ಡಿಸೆಂಬರ್ 9ರಿಂದ ಡಿಸೆಂಬರ್ 28ರ ನಡುವಿನ ಅವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಫೋನ್ ಪೇ, ಪೇಟಿಎಂ ಹಾಗೂ ಕ್ಯಾಶ್ ಡೆವಾಸಿಟ್ ಮೂಲಕ ಒಟ್ಟು 12.46 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದು, ಹಣ ವಾಪಸ್ ಸಿಗದೆ ಮೋಸ ಹೋಗಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಇತ್ತೀಚೆಗೆ ಪುಣೆಯಲ್ಲಿ ಸ್ಮಾರ್ಟ್ ಕಿಡ್ ಅಬಾಕಸ್ ಪ್ರೈವೇಟ್ ಲಿಮಿಟೆಡ್ ಇವರು ಆಯೋಜಿಸಿದ 14ನೇ ರಾಷ್ಟ್ರೀಯ ಮತ್ತು 7ನೇ ಅಂತರಾಷ್ಟ್ರೀಯ ಅಬಾಕಸ್ ಮತ್ತು ವೇದಿಕ್ ಮ್ಯಾತ್ಸ್ ಸ್ಪರ್ಧೆಯಲ್ಲಿ ಉಡುಪಿ ಸಂತೆಕಟ್ಟೆಯ ಸ್ಮಾರ್ಟ್ ಕಿಡ್ ಅಬಾಕಸ್ನ ವಿದ್ಯಾರ್ಥಿಗಳಾದ ಹರ್ಷವರ್ಧನ್ ಬಿ. ವೈ, ಧನುಶ್ ಅಂದರ್ಶ್ (ಪೋದರ್ ಇಂಟರ್ ನ್ಯಾಶನಲ್ ಸ್ಕೂಲ್), ಆಯುಷ್ ಪಿ ಶೆಟ್ಟಿ (ಜಿ. ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ) ಶಿಶೀರ್ ಬಂಗೇರ, ರಿತಿನ್ ಪಿ ಶೆಟ್ಟಿ (ವಿಜಯ ಮಕ್ಕಳ ಕೂಟ, ವತ್ರಾಡಿ, ವಂಡ್ಸೆ) ಯದುಕೃಷ್ಣ ಎಮ್ (ಗುಂಡಿಬೈಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್) ಭಾಗ್ಯ ಲಕ್ಮಿ (ರಾಧಾ ವಿದ್ಯಾನಿಕೇತನ ತೆಂಕನಿಡಿಯೂರು) ಮನಸ್ವಿ ಸುವರ್ಣ(ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ) ಇವರು ಭಾಗವಹಿಸಿದ್ದು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕಿ ಮಾಲತಿ ಶಿವರಾಮ್ ಶೆಟ್ಟಿ ಇವರಿಗೆ ಸ್ಮಾರ್ಟ್ ಕಿಡ್ ಅಬಾಕಸ್ನ ಸಂಜಯ್ ಕಲಂಕರ್ರವರು ಬೆಸ್ಟ್ ಫ್ರ್ಯಾಂಚಾಯ್ಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಬಿಜೆಪಿ ಅಪಪ್ರಚಾರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ: ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷ ತಬ್ರೇಜ್
ಉಡುಪಿ : ಗಂಗೊಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗಂಗೊಳ್ಳಿಯ ಜನತೆ ತಿರಸ್ಕರಿಸಿ, ಕಾಂಗ್ರೆಸ್ ಹಾಗೂ ಎಸ್ಡಿಪಿಐ ಪಕ್ಷವನ್ನು ಬೆಂಬಲಿಸಿದೆ. ಇದರಿಂದ ಬಿಜೆಪಿ ಪಕ್ಷದ ನಾಯಕರು ಹತಾಶೆಗೆ ಒಳಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಬ್ರೇಜ್ ಹೇಳಿದರು.

ಮೊನ್ನೆಯ ದಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಅಧಿಕಾರ ಸ್ವೀಕರಿಸಿದ ವೇಳೆ ಕಚೇರಿ ಒಳಗೆ ಗಣಹೋಮ ಮತ್ತು ದುವಾ ಮಾಡಿದ್ದೇವೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಜನತೆಯ ಅಭಿವೃದ್ಧಿಗಾಗಿ ದುವಾ ಪ್ರಾರ್ಥನೆ ಮಾಡಿದ್ದೇವೆ ಹೊರತು ಬೇರೆ ಯಾವುದೇ ದುರುದ್ದೇಶ ಇಲ್ಲ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಹೆಬ್ರಿ : ಶಿವಪುರ ಗ್ರಾಮದ ರಾಂಪುರ ಎಂಬಲ್ಲಿ ಬೈಕ್ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಶಿವಪುರ ಮೂರ್ಸಾಲು ನಿವಾಸಿ ರಾಹುಲ್ (25) ಮೃತಪಟ್ಟ ಘಟನೆ ಸಂಭವಿಸಿದೆ.
ಎದುರುಗಡೆಯಿಂದ ಸ್ವಿಪ್ಟ್ ಕಾರಿನ ಚಾಲಕ ಅರುಣ್ ಅತೀ ವೇಗವಾಗಿ ಮತ್ತು ಅಜಾರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಎದುರಿನಿಂದ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.
ಅವರನ್ನು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲಕಾರಿಯಾಗದೆ ಸಾವನ್ನಪ್ಪಿದರು. ರಾಹುಲ್ ಮುಳ್ಳುಗುಡ್ಡೆ ಶಾಲೆಯಲ್ಲಿ ನಡೆದ ನಾಟಕವನ್ನು ನೋಡಿ ಮನೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ : ಕುಂದಾಪುರ ತಾಲೂಕು ಕಟ್ ಬೆಲ್ತೂರು ಹರಗೋಡು ಕ್ರಾಸ್ನಲ್ಲಿರುವ ಮಲಯಾಳಿ ಬೊಬ್ಬರ್ಯ ಹಾಗೂ ಕೆಂಪಣ್ಣಹೈಗುಳಿ ಸಹಪರಿವಾರ ದೈವಸ್ಥಾನದ ಪಕ್ಕದಲ್ಲಿರುವ ಹಾಡಿ ಜಾಗದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಗಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ವಕ್ವಾಡಿ ಗ್ರಾಮದ ಸದಾನಂದ (44) ಮತ್ತು ಕಟ್ ಬೇಲ್ಲೂರು ಗ್ರಾಮದ ಗಂಗಾಧರ (49) ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಕಟ್ ಬೇಲ್ಲೂರು ಗ್ರಾಮದ ಸಂಜೀವ ಮತ್ತು ರಜತ್ ಹಾಗೂ ಬಗ್ವಾಡಿ ಗ್ರಾಮದ ಸೋನು ಪರಾರಿಯಾಗಿದ್ದಾರೆ.
ಬಂಧಿತರಿಂದ ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ 17,200 ರೂಪಾಯಿ ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ : ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿಯ ಅರ್ಪಾಟ್ಮೆಂಟ್ವೊಂದರಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಉಡುಪಿ ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ ರವರ ನಿರ್ದೇಶನದಂತೆ ಮಣಿಪಾಲ ಠಾಣೆಯ ಪಿ.ಐ ದೇವರಾಜ್ ಟಿ ವಿ ನೇತೃತ್ವದಲ್ಲಿ ಪಿಎಸ್ಐ ಅನೀಲ್, ಎಎಸ್ಐ ವಿವೇಕ್ ಹಾಗೂ ಸಿಬ್ಬಂದಿಗಳಾದ ವಿದ್ಯಾ, ಇಮ್ರಾನ್, ಪ್ರಸನ್, ಮಂಜುನಾಥರವರನ್ನೊಳಗೊಂಡ ತಂಡ ಅರ್ಪಾಟ್ಮೆಂಟ್ಮೇಲೆ ದಾಳಿ ಮಾಡಿ ಅನೈತಿಕ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ರಘುನಂದನ್ (40) ಹಾಗೂ ದಾವರಣಗೆರೆ ಜಿಲ್ಲೆ ಹರಿಹರದ ಅಮೀನಾ ಬೇಗಂ (55) ಎಂದು ಗುರುತಿಸಲಾಗಿದೆ.
ಆರೋಪಿಗಳು ವೇಶ್ಯಾವಾಟಿಕೆ ವ್ಯವಹಾರ ನಡೆಸಲು ಬಳಸಿಕೊಂಡಿದ್ದ ಬೆಂಗಳೂರು ಮೂಲದ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಹಾಸನ ಜಿಲ್ಲೆಯ ಹಿರೀಸಾವೆ ಗ್ರಾಮದ ರವೀಶ್ ಎಂಬ ಆರೋಪಿ ಬಂಧನಕ್ಕೆ ಮಣಿಪಾಲ ಠಾಣಾ ಪಿ.ಐ ದೇವರಾಜ್ ಟಿ ವಿ ನೇತೃತ್ವದ ತಂಡ ತನಿಖೆ ಮುಂದುವರೆಸಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಈ ಮಣಿಪಾಲ ಪೊಲೀಸರ ಕಾರ್ಯಚರಣೆಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಉಡುಪಿ : ಮಣಿಪಾಲದ ರಜತಾದ್ರಿ ರಸ್ತೆಯಲ್ಲಿ ಬೈಕ್ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನವರಿ 4ರಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಬೈಕ್ನಲ್ಲಿ ಹಿಂಬದಿಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕುರಿಸಿಕೊಂಡು ಮಣಿಪಾಲ ಹಾಗೂ ರಜತಾದ್ರಿ ರಸ್ತೆಗಳಲ್ಲಿ ಮಾನವ ಜೀವಕ್ಕೆ ತೊಂದರೆ ಮಾಡುವ ರೀತಿಯಲ್ಲಿ ಅಪಾಯಕಾರಿಯಾಗಿ ವಾಹನವನ್ನು ಚಲಾಯಿಸಿದಲ್ಲದೇ ಚಾಲನೆ ಮಾಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ದೃಶ್ಯಾವಳಿಗಳು ವೈರಲ್ ಆಗಿತ್ತು.
ಈ ಕುರಿತು ಮಣಿಪಾಲ ಠಾಣಾ ಪಿ.ಐ ದೇವರಾಜ್ ಟಿ.ವಿ ನೇತೃತ್ವದ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್, ಅಕ್ಷಯ ಕುಮಾರಿ, ಸಿಬ್ಬಂದಿಗಳಾದ ವಿವೇಕ್, ಪ್ರಸನ್ನ, ಇಮ್ರಾನ್, ಸುರೇಶ್ ಶೆಟ್ಟಿ ಹಾಗೂ ಸುಕುಮಾರ್ ಶೆಟ್ಟಿ ರುದ್ರವ್ವರವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಮಹಮ್ಮದ್ ಆಶಿಕ್(19) ಆತ್ರಾಡಿ ಗ್ರಾಮ ಈತನನ್ನು ದಸ್ತಗಿರಿ ಮಾಡಿ ವೀಲಿಂಗ್ ಮಾಡಲು ಬಳಿಸಿದ ಸ್ಕೂಟರ್ನ್ನು ವಶಕ್ಕೆ ಪಡೆದಿದ್ದಾರೆ.
ಆಶಿಕ್ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಣಿಪಾಲ ಪೊಲೀಸರ ಕಾರ್ಯಚರಣೆಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
“ವಿಶೇಷ ಆಹ್ವಾನಿತ ಯೂತ್ ಐಕಾನ್” ಆಗಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಆಯ್ಕೆ!
ಕಾರ್ಕಳ : ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ದೆಹಲಿಯ ಭಾರತ್ ಮಂಡಪಂನಲ್ಲಿ ನಡೆಯಲಿರುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ “ವಿಶೇಷ ಆಹ್ವಾನಿತ ಯೂತ್ ಐಕಾನ್” ಆಗಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಉದ್ಯಮಿ ಇನ್ನಾ ಉದಯ ಶೆಟ್ಟಿ ಮತ್ತು ಜಿ. ಪಂ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಡಿ ಯವರ ಪುತ್ರಿಯಾಗಿದ್ದಾರೆ.
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಲು ರಾಷ್ಟ್ಟೀಯ ಮಟ್ಟದ ಯುವ ಪ್ರತಿಭೆಗಳ 2 ದಿನದ ಅಧಿವೇಶನ ದೆಹಲಿಯಲ್ಲಿ ಜನವರಿ 11, ಮತ್ತು 12 ರಂದು ನಡೆಯಲಿದ್ದು ಭಾರತಾದ್ಯಂತದ 3 ಸಾವಿರ ಯುವಕ ಯುವತಿಯರು ಆಯ್ಕೆಯಾಗಿದ್ದಾರೆ. ದೇಶದ ಅಭಿವೃದ್ದಿಗೆ ಸಂಬಂಧಿಸಿದಂತೆ ವಿಕಸಿತ ಭಾರತದ ವಿವಿಧ ಕ್ಷೇತ್ರಗಳ ವಿಷಯಗಳ ಬಗ್ಗೆ ಚರ್ಚೆ, ವಿಚಾರ ಮಂಡನೆ ಮತ್ತು ಸಂವಾದಗಳು ನಡೆಯಲಿದ್ದು ಆಹ್ವಾನಿತರು ತಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ವಿವಿಧ ಇಲಾಖೆಗಳ ಪ್ರದರ್ಶನಗಳು ಇರಲಿವೆ. ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಕೇಂದ್ರದ ವಿವಿಧ ಇಲಾಖಾ ಮಂತ್ರಿಗಳು, ಅಧಿಕಾರಿಗಳು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪರಿಣಿತರೊಂದಿಗೆ ಸಂವಾದ ನಡೆಯಲಿದೆ.
ಮನು ಶೆಟ್ಟಿಯವರು ಉಡುಪಿ ಎಂಜಿಎಂ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿ ಸಂಘಟನೆ ಎಬಿವಿಪಿ ಹಾಗೂ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಪಡುಬಿದ್ರಿಯ ಸಕ್ರೀಯ ಸದಸ್ಯೆಯಾಗಿದ್ದಾರೆ.