ಉಡುಪಿ : ಶಿವಾನಂದ ಶೆಟ್ಟಿ ಮತ್ತು ಸುಜಾತ ಶೆಟ್ಟಿ ಹೆಬ್ರಿ ಇವರ ಪುತ್ರಿ, ವಿದ್ಯೋದಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಉಡುಪಿ ಇದರ ಏಳನೇ ತರಗತಿ ವಿಧ್ಯಾರ್ಥಿನಿ ಹಾಗೂ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ, ಬಹುಮುಖ ಪ್ರತಿಭೆಯ ಕುಮಾರಿ ಶಿವಾನಿ ಶೆಟ್ಟಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್ಜಿಎಸ್ ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜರುಗಿದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿ ಅಂತರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ. ಇವಳಿಗೆ ಯೋಗ ತರಬೇತಿಯನ್ನು ಕೆ. ನರೇಂದ್ರ ಕಾಮತ್ ಕಾರ್ಕಳ ಇವರು ನೀಡಿದ್ದಾರೆ.
Social
ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ
ಉಡುಪಿ : ಉಡುಪಿಯ ಶ್ರೀಕೃಷ್ಣಮಠದಲ್ಲಿಂದು ಪ್ರಥಮನ ಏಕಾದಶಿ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀಗಳು ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಮಹಾಪೂಜೆ ಪೂರೈಸಿದ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆಗಾಗಿ ಬಂದವರ ಸರತಿ ಸಾಲು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರೀಕೃಷ್ಣಮಠದ ಮುಂಭಾಗದಲ್ಲಿತ್ತು.
ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಪರ್ಯಾಯ ಶ್ರೀಗಳು ಭಕ್ತರ ತೋಳಿನಲ್ಲಿ ಮುದ್ರಿಸಿದರು. ಉಡುಪಿ ಮಾತ್ರವಲ್ಲದೆ ನಾಡಿನ ಬಹುತೇಕ ಮಠಗಳಲ್ಲಿ ವಿವಿಧ ಮಠಾಧೀಶರುಗಳು ಈ ದಿನ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡುವ ಸಂಪ್ರದಾಯವಿದೆ.
ಬ್ರಹ್ಮಾವರ : ಉಡುಪಿಯಲ್ಲಿ ಮಳೆ ಕೊಂಚ ವಿರಾಮ ನೀಡಿದೆ. ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದ ನದಿಗಳು ಮಂದಗತಿಯಲ್ಲಿ ಹರಿಯಲಾರಂಭಿಸಿವೆ. ಪಶ್ಚಿಮ ಘಟ್ಟದ ತಪಲು ಪ್ರದೇಶದಲ್ಲೂ ವಾತಾವರಣ ತಿಳಿಯಾಗಿದೆ.
ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಬ್ರಹ್ಮಾವರ ತಾಲೂಕಿನ ಚಾಂತರು ಗ್ರಾಮದಲ್ಲಿ ಹರಿಯುವ ಸೀತಾ ನದಿ ತನ್ನ ವೇಗ ತಗ್ಗಿಸಿದೆ. ಚಾಂತಾರು ಗ್ರಾಮದ ಹೇರೂರು ಉಗ್ಗೇಲುಬೆಟ್ಟು ಎಂಬಲ್ಲಿರುವ ಕಿಂಡಿ ಅಣೆಕಟ್ಟಿಗೆ ಬಾರಿ ಗಾತ್ರದ ಮರದ ದಿಮ್ಮಿಗಳು ಸಿಲುಕಿತ್ತು. ಹರಿದು ಬರುವ ನೀರಿನಲ್ಲಿ, ದೊಡ್ಡ ಪ್ರಮಾಣದ ಮರದ ದಿಮ್ಮಿಗಳು ಬಂದು ಅಣೆಕಟ್ಟು ಪ್ರದೇಶದಲ್ಲಿ ಸಿಲುಕುವುದು ಸಾಮಾನ್ಯ. ಇದೀಗ ಅಣೆಕಟ್ಟಿಗೆ ಸಿಲುಕಿದ ಮರಗಳನ್ನು ಪಂಚಾಯತ್ ಅಧಿಕಾರಿಗಳು ಸದಸ್ಯರ ನೆರವಿನೊಂದಿಗೆ ತೆರವು ಮಾಡಿದ್ದಾರೆ. ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ನಿವಾಸಿಗಳೂ ಕೈಜೋಡಿಸಿದ್ದಾರೆ.
ಕೆಮ್ಮಣ್ಣು : ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಹೂಡೆ ಇವರ ಸಹಯೋಗದೊಂದಿಗೆ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಖಿಲಾ ಡಿ., ಹಾಗೂ ಡಾ. ಶ್ರೀಕಾ, ಡಾ. ನಂದನಾ, ಡಾ. ಶ್ವೇತಾ, ಡಾ.ಉತ್ಕರ್ಷ್ ಅಗರ್ವಾಲ್, ಡಾ. ಅನಂತ್ ಸಿಂಗಲ್, ಡಾ. ಸುಜಿತ್ ಬಿಕ್ಕುಮಾನ್ಲಾ ಮತ್ತು ಸೆಂಟ್ರಲ್ ಮಿಚಿಗನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೂದಲು ಕಸಿ ಕ್ಲಿನಿಕ್ (ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್) ಪ್ರಾರಂಭ
ಮಣಿಪಾಲ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಅತ್ಯಾಧುನಿಕ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಅನ್ನು ಇಂದು ಹೆಮ್ಮೆಯಿಂದ ಉದ್ಘಾಟಿಸಿದೆ. ಈ ಹೊಸ ಕ್ಲಿನಿಕ್ ಸುಧಾರಿತ ಕೂದಲು ಕಸಿ ಸೇವೆಗಳನ್ನು ನೀಡುತ್ತದೆ, ಪರಿಣಾಮಕಾರಿ ಕೂದಲು ಪುನಃಸ್ಥಾಪನೆ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುತ್ತದೆ.
ಕೂದಲು ಕಸಿ ಮಾಡುವಿಕೆಯು ಕನಿಷ್ಟ ಆಕ್ರಮಣಶೀಲ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಕೂದಲು ಕಿರುಚೀಲಗಳನ್ನು ದಟ್ಟವಾದ ಬೆಳವಣಿಗೆಯನ್ನು ಹೊಂದಿರುವ ಪ್ರದೇಶಗಳಿಂದ ಅಂದರೆ , ಸಾಮಾನ್ಯವಾಗಿ ನೆತ್ತಿಯ ಹಿಂಭಾಗ ಅಥವಾ ಬದಿಗಳಿಂದ, ಕೂದಲು ಉದುರುವಿಕೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಸ್ಥಳಾಂತರಿಸುತ್ತದೆ. ಈ ತಂತ್ರವು ಸಂಸ್ಕರಿಸಿದ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಕಾಣುವ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ. ಈ ಕಾರ್ಯವಿಧಾನಕ್ಕೆ ಸೂಕ್ತವಾದ ಅಭ್ಯರ್ಥಿಗಳು ಆನುವಂಶಿಕ ಅಂಶಗಳು, ಆಘಾತ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಗಮನಾರ್ಹ ಕೂದಲು ಉದುರುವಿಕೆಯನ್ನು ಅನುಭವಿಸುವ ವ್ಯಕ್ತಿಗಳು ಮತ್ತು ಅಭ್ಯರ್ಥಿಯು ಪ್ರದೇಶದಲ್ಲಿ ಸಾಕಷ್ಟು ಆರೋಗ್ಯಕರ ಕೂದಲು ಕಿರುಚೀಲಗಳನ್ನು ಹೊಂದಿರಬೇಕು .
ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಡಾ. ಶರತ್ ಕುಮಾರ್ ರಾವ್ ಅವರು, ವಿಶೇಷವಾಗಿ ಯುವ ಜನರಲ್ಲಿ ಕೂದಲು ಉದುರುವಿಕೆಯ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಒತ್ತಿ ಹೇಳಿದರು. ಅವರು ಕೂದಲು ಉದುರುವಿಕೆಗೆ ಕಾರಣವಾಗುವ ಆನುವಂಶಿಕ ಅಂಶಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಸೇರಿದಂತೆ ವಿವಿಧ ಕಾರಣಗಳನ್ನು ಹೈಲೈಟ್ ಮಾಡಿದರು ಮತ್ತು ಆರಂಭಿಕ ಕೂದಲು ನಷ್ಟದ ಮಾನಸಿಕ ಪರಿಣಾಮವನ್ನು ಒಪ್ಪಿಕೊಂಡರು. “ಕೂದಲು ಕಸಿ ಮಾತ್ರ ಇದಕ್ಕೆ ಕಾರ್ಯಸಾಧ್ಯವಾದ ಪರಿಹಾರವಾಗಿದೆ” ಎಂದು ಡಾ. ರಾವ್ ಹೇಳಿದರು, ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಯುವಕರು ಮತ್ತು ಇತರರು ಹೊಸ ಚಿಕಿತ್ಸಾಲಯದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಚ್.ಅಶೋಕ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ವಿನೂತನ ಸೇವೆಗಳನ್ನು ಪರಿಚಯಿಸುವ ಬದ್ಧತೆಯನ್ನು ಹೊಂದಿದೆ ಎಂದು ಶ್ಲಾಘಿಸಿದರು. ಉಡುಪಿ ಜಿಲ್ಲಾ ಆಸ್ಪತ್ರೆಯೊಂದಿಗೆ ಆಸ್ಪತ್ರೆಯ ಸಹಯೋಗವನ್ನು ಗಮನಿಸಿದ ಅವರು ಈ ಪ್ರದೇಶದಲ್ಲಿ ರೋಗಿಗಳ ಆರೈಕೆಯನ್ನು ಹೆಚ್ಚಿಸಲು 250 ಹಾಸಿಗೆಗಳ ಹೊಸ ಬ್ಲಾಕ್ನ ಯೋಜನೆಯನ್ನು ಘೋಷಿಸಿದರು. “ನಾವು ಈ ವಿಸ್ತರಣೆಗೆ ನಿಮ್ಮ ಸಹಕಾರವನ್ನು ಬಯಸುತ್ತೇವೆ ಮತ್ತು ಹೊಸ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ಗೆ ಉತ್ತಮ ಯಶಸ್ಸನ್ನು ಬಯಸುತ್ತೇವೆ” ಎಂದು ಡಾ. ಅಶೋಕ ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರಾನ್ ಶೆಟ್ಟಿ ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜೋಸೆಫ್ ಥಾಮಸ್ ಅವರು ಕ್ಲಿನಿಕ್ನ ಸೇವೆಗಳ ಅವಲೋಕನವನ್ನು ನೀಡಿದರು ಮತ್ತು ಸಭೆಗೆ ಆತ್ಮೀಯ ಸ್ವಾಗತವನ್ನು ನೀಡಿದರು.
ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಈಗ ಸಾರ್ವಜನಿಕರಿಗೆ ತೆರೆದಿದ್ದು, ಕೂದಲು ಉದುರುವಿಕೆಯೊಂದಿಗೆ ಹೋರಾಡುತ್ತಿರುವವರಿಗೆ ಭರವಸೆ ಮತ್ತು ಸುಧಾರಿತ ಆರೈಕೆಯನ್ನು ನೀಡುತ್ತದೆ.
ಎಡೆಬಿಡದೆ ಸುರಿಯುತ್ತಿರುವ ಮಳೆ: ಹಲವು ಕುಟುಂಬಗಳ ಸ್ಥಳಾಂತರ, ಜನಜೀವನ ಅಸ್ತವ್ಯಸ್ತ
ಬ್ರಹ್ಮಾವರ/ಕುಂದಾಪುರ : ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಂದಾಪುರ, ಬ್ರಹ್ಮಾವರ ಮತ್ತು ಬೈಂದೂರು ತಾಲೂಕಿನಲ್ಲಿ ಮಳೆಯಿಂದ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ಬೈಲಾಡಿ, ತೆಂಕಬೆಟ್ಟು, ಗುಳ್ಳಾಡಿ, ಮೊಗೆಬೆಟ್ಟು ತಗ್ಗು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ನೂರಾರು ಎಕರೆ ಕೃಷಿಭೂಮಿಗಳು ಸೇರಿದಂತೆ ತಗ್ಗುಪ್ರದೇಶಗಳ ಮನೆಗಳು ಜಲಾವೃತವಾಗಿದೆ.

ಅಗ್ನಿಶಾಮಕ ದಳದ ಸಿಬಂದಿ, ತೆಕ್ಕಟ್ಟೆ ವಲಯದ ಬೇಳೂರು ವಿಪತ್ತು ನಿರ್ವಹಣಾ ಘಟಕದ ಶೌರ್ಯಪಡೆಯ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಿಂದ ದೋಣಿ ಮೂಲಕ ಈ ಪರಿಸರದ ಸುಮಾರು 8 ಕುಟುಂಬದ ಸುಮಾರು 25 ಮಂದಿ ನೆರೆ ಪೀಡಿತ ನಿರಾಶ್ರಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ನೆರೆ ಪೀಡಿತ ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ಪರಿಸರಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ ಸಹಿತ ಕಂದಾಯ ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದರು.
ಉಡುಪಿ : ಉಡುಪಿ ಜಿಲ್ಲೆಯಲ್ಲಿ 156 ಬಿಎಸ್ಎನ್ಎಲ್ ಟವರ್ಗಳಿದ್ದು ನೆಟ್ವರ್ಕ್ ಪ್ರಮಾಣ ವಿಪರೀತ ಕಡಿಮೆಯಾದ ಕಾರಣ ಲಕ್ಷಾಂತರ ಗ್ರಾಹಕರು ಬಿಎಸ್ಎನ್ಎಲ್ನಿಂದ ಖಾಸಗಿ ಸಂಸ್ಥೆಯ ಸಿಮ್ಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಇದರಿಂದಾಗಿ ಬಿಎಸ್ಎನ್ಎಲ್ನ ಗೌರವ ಕಡಿಮೆಯಾಗುವುದಲ್ಲದೆ ದೇಶೀಯ ಮೊಬೈಲ್ ಸಂಸ್ಥೆಯೊಂದು ಖಾಸಗಿ ಸಂಸ್ಥೆಗಳಿಗೆ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ನೆಟ್ವರ್ಕ್ ಪ್ರಮಾಣವನ್ನು ಹೆಚ್ಚು ಗೊಳಿಸುವುದು ಮತ್ತು ಯಾವ ಟವರ್ನಲ್ಲಿ ವಿದ್ಯುತ್ ಇಲ್ಲದಿದ್ದಾಗ ಮೊಬೈಲ್ ಸಂಪರ್ಕ ಕಡಿತವಾಗುತ್ತದೆ ಅಲ್ಲಿ ಬ್ಯಾಟರಿ ಅಳವಡಿಕೆ ಮಾಡುವುದು. ಯಾವ ಗ್ರಾಮದಲ್ಲಿ ಬಿಎಸ್ಎನ್ಎಲ್ಗೆ ಸಿಬ್ಬಂದಿಗಳ ಕೊರತೆ ಇದೆಯೋ ಅಲ್ಲಿ ವೆಚ್ಚವನ್ನು ಭರಿಸುವ ಭರವಸೆಯೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗೆ ನಿರ್ವಹಣೆ ಬಗ್ಗೆ ಜವಾಬ್ದಾರಿ ನೀಡುವ ಬಗ್ಗೆ ಪರಿಶೀಲಿಸಿ ಎಂದು ಸಂಸದ ಕೋಟ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಟವರ್ ನಿರ್ಮಾಣಕ್ಕೆ ಉದ್ದೇಶಿತ 41 ಟವರ್ಗಳ ಪೈಕಿ ನಾಲ್ಕು ಟವರ್ಗಳನ್ನು ನಿರ್ಮಿಸಲು ನಿವೇಶನವನ್ನು ಮುಂದಿನ ನಾಲ್ಕು ದಿವಸದಲ್ಲಿ ಒದಗಿಸುವುದಾಗಿ ಕುಂದಾಪುರದ ತಹಶಿಲ್ದಾರ್ ಶೋಭಾ ಹಾಗೂ ಬೈಂದೂರು ತಹಶೀಲ್ದಾರ್ ಪ್ರತಿಭಾ ಭರವಸೆ ನೀಡಿದರು. ಬಿಎಸ್ಎನ್ಎಲ್ನ ಬಹುಮಹಡಿ ಕಟ್ಟಡ ಉಪಯೋಗವಿಲ್ಲದೆ ಉಳಿದಿದ್ದು ಅದನ್ನು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳ ಬಳಕೆಗೆ ನೀಡುವಂತೆ ಕೋಟ ಸಲಹೆ ನೀಡಿದರು. ಸದ್ಯದಲ್ಲೇ ಬೆಂಗಳೂರಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಸೇರಿದಂತೆ ಸಭೆ ನಡೆಸಲಾಗುವುದೆಂದು ಸಂಸದರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ವಿದ್ಯಾ ಕುಮಾರಿ, ತಹಶಿಲ್ದಾರರು ಹಾಗೂ ಬಿಎಸ್ಎನ್ಎಲ್ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.

ಬ್ರಹ್ಮಾವರ ಕೃಷಿ ಡಿಪ್ಲೋಮ ಜೊತೆಗೆ ಕೃಷಿ ಕಾಲೇಜು ಆರಂಭಿಸಲಿ : ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ : ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಸ್ಥಳೀಯ ಜನತೆಯ ಒಕ್ಕೊರಲ ಬೇಡಿಕೆಯಾಗಿದ್ದ ಕೃಷಿ ಮಹಾವಿದ್ಯಾಲಯ ಆರಂಭಿಸುವ ಮನವಿಯನ್ನು ಪರಿಗಣಿಸದೆ ರಾಜ್ಯ ಸರ್ಕಾರ ಡಿಪ್ಲೋಮ ಪದವಿಯನ್ನು ಪುನರಾರಂಭಿಸಲು ಆದೇಶ ನೀಡಿದ್ದು, ಸರಕಾರ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಈಗಾಗಲೇ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೃಷಿ ವಿಭಾಗದಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿ, ಬಿಜೆಪಿ ರೈತ ಮೋರ್ಚಾ ಹಾಗೂ ವಿವಿಧ ಸಂಘಟನೆಗಳು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿಯವರು ಬ್ರಹ್ಮಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಕೃಷಿ ಕಾಲೇಜು ಆರಂಭಕ್ಕೆ ಮನವಿ ಮಾಡಿದ್ದೇನೆ.
2022ರಲ್ಲಿ ರಾಜ್ಯ ಸರ್ಕಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಡಿಪ್ಲೋಮ ಕೋರ್ಸ್ಗಳನ್ನು ಮುಂದುವರೆಸದಂತೆ ಆದೇಶ ನೀಡಿದೆ. ಡಿಪ್ಲೋಮ ಕೋರ್ಸಿನ ಮಾನ್ಯತೆಯ ಗೊಂದಲ, ಉದ್ಯೋಗಾವಕಾಶ ಹಾಗೂ ಭವಿಷ್ಯದ ಅನಿಶ್ಚಿತತೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಡಿಪ್ಲೋಮ ಕೋರ್ಸಿಗೆ ಪ್ರವೇಶ ಪಡೆಯಲು ಅಸಕ್ತಿ ತೋರುತ್ತಿಲ್ಲ.
ರಾಜ್ಯ ಸರಕಾರ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಆರಂಭಿಸಲು ಪೂರಕವಾಗಿರುವ 300 ಎಕ್ರೆ ಜಾಗದೊಂದಿಗೆ ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಹೊಂದಿದ್ದು, ಸರ್ಕಾರಕ್ಕೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಿಲ್ಲದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸಿ ಕರಾವಳಿ ಭಾಗದ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
ಮಂಗಳೂರು : ಹಿರಿಯ ರಂಗನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ಸಿನಿಮಾ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ (93) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಮಧ್ಯಾಹ್ನ 1ರಿಂದ 3ರವರೆಗೆ ಪುರಭವನದಲ್ಲಿ ವ್ಯವಸ್ಥೆ ಮಾಡಲಾಗುವುದು. ಬಳಿಕ ಅವರ ಬಯಕೆಯಂತೆ ದೇಹದಾನವನ್ನು ಮಾಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಕನ್ನಡದಲ್ಲಿ ಅತ್ಯಂತ ಯಶಸ್ವಿ ರಂಗಭೂಮಿ ನಿರ್ದೇಶಕರಾಗಿ ನೂರಾರು ನಾಟಕಗಳನ್ನು ನಿರ್ದೇಶಿಸಿದ ಇವರು ಕೋರ್ಟ್ಮಾರ್ಷಲ್, ಉರುಳು, ಮಳೆನಿಲ್ಲುವವರೆಗೆ, ಗುಡ್ಡದ ಭೂತ, ಸುಳಿ ಮುಂತಾದವು ಪ್ರಯೋಗಾತ್ಮಕ, ಸದಭಿರುಚಿಯ ನಾಟಕಗಳು. ಸದಾನಂದ ಸುವರ್ಣ ಅವರು ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ ಸಿನಿಮಾಕ್ಕೆ ನಿರ್ಮಾಪಕರಾಗುವ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಈ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾವೆಂದು ಸ್ವರ್ಣಕಮಲ ಪ್ರಶಸ್ತಿ ಲಭಿಸಿತ್ತು. ಬಳಿಕ ಕಾಸರವಳ್ಳಿಯವರ ತಬರನ ಕತೆ, ಮನೆ, ಕ್ರೌರ್ಯ ಮುಂತಾದ ಸಿನಿಮಾಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಅನುವಭವ ಪಡೆದವರು.
ಬಳಿಕ ಕುಬಿ ಮತ್ತು ಇಯಾಲ ಎಂಬ ಸದಭಿರುಚಿಯ ಚಿತ್ರ ನಿರ್ದೇಶಿಸಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಈ ಸಿನಿಮಾಕ್ಕೆ ನಾಲ್ಕು ಪ್ರಶಸ್ತಿ ಬಂದಿತ್ತು. ಬಳಿಕ ಇವರು ನಿರ್ದೇಶಿಸಿದ ಗುಡ್ಡೆದ ಭೂತ ಟೆಲಿಚಿತ್ರ ಜನಮನ್ನಣೆ ಗಳಿಸಿದ್ದು ಮಾತ್ರವಲ್ಲದೆ ಉತ್ತಮ ಧಾರಿವಾಹಿ ಪ್ರಶಸ್ತಿಯನ್ನು ಪಡೆದಿತ್ತು. ಮೂಲತಃ ದ.ಕ.ಜಿಲ್ಲೆಯ ಮುಲ್ಕಿಯವರಾದ ಸದಾನಂದ ಸುವರ್ಣ ಮುಂಬಯಿಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದವರು. ಅಲ್ಲಿ ರಾತ್ರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ 5ವರ್ಷ ಕೆಲಸ ಮಾಡಿ, 3 ದಶಕಗಳ ಕಾಲ ಬಣ್ಣದ ವ್ಯಾಪಾರಿಯಾಗಿದ್ದರು. ಬಳಿಕ ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ ಐದು ದಶಕಗಳ ಕಾಲ ಶ್ರಮಿಸಿದ ಅವರು ಮುಂಬೈ ತೊರೆದು ಮಂಗಳೂರಿನಲ್ಲಿ ನೆಲೆಸಿದ್ದರು.
‘ಮನೆಯೇ ಗ್ರಂಥಾಲಯ’ ಸುವರ್ಣ ಸಂಭ್ರಮ-ಗಾಂಧಿ ಆಸ್ಪತ್ರೆಯಲ್ಲಿ ಸುಸಜ್ಜಿತ ಗ್ರಂಥಾಲಯ
ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮ “ಮನೆಯೇ ಗ್ರಂಥಾಲಯ” ಇದರ ಸುವರ್ಣ ಸಂಭ್ರಮವು ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ನಡೆಯಿತು. ಕನ್ನಡದ ಪ್ರಸಿದ್ಧ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಮಾಡುವ ಮೂಲಕ ರೋಗಿಗಳ ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಅಲ್ಲದೆ ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಆರೋಗ್ಯಕ್ಕೆ, ಸಮಾಜಕ್ಕೆ, ಪರಿಸರಕ್ಕೆ ಸಂಬಂಧಿಸಿದ ವಿವಿದ ಬಗೆಯ ಪುಸ್ತಕಗಳು ಲಭ್ಯವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರನ್ನು ಕ ಸಾ ಪ ಉಡುಪಿ ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು. ಉಡುಪಿ ಕರಾವಳಿ ಐಎಂಎ ಇದರ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಕೋಶಾಧಿಕಾರಿ ಡಾ. ಆಮ್ನಾ ಹೆಗ್ಡೆ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಕಸಾಪ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಪದ್ಮಾಸಿನಿ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಸಂಧ್ಯಾ ಶೆಣೈ, ಸತೀಶ್ ಕೊಡವೂರು, ಲಕ್ಷ್ಮಿ ಹರೀಶ್ಚಂದ್ರ, ಪಂಚಮಿ, ಹಫೀಜ್ ರಹೆಮಾನ್, ಸುಭೋದ್, ಶಶಿಕಾಂತ್ ಶೆಟ್ಟಿ, ಪ್ರಭಾಕರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.