ಉಡುಪಿ : ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ರಸ್ತೆಯು ಕಿರಿದಾಗಿದ್ದು, ಪದೇ ಪದೇ ಅಪಘಾತಗಳು ನಡೆಯುತ್ತಿದ್ದ ಕಾರಣ ಮಾನ್ಯ ಪೊಲೀಸ್ ಉಪಾಧಿಕ್ಷಕರದ ಡಿ ಟಿ ಪ್ರಭುರವರ ಮಾರ್ಗದರ್ಶನದಲ್ಲಿ, ಮಾನ್ಯ ಮಣಿಪಾಲ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ರವರ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ರಾ ಹೆ 166 ಎ ರಲ್ಲಿ ರಸ್ತೆಯ ಮದ್ಯೆ ದ್ವಿಭಾಜಕಕ್ಕೆ ಹಾಕಿರುವ ಕಲ್ಲುಗಳನ್ನು ಜೆಸಿಬಿಯಿಂದ ತೆಗೆಸಿ ಅಲ್ಲಿ ಬ್ಯಾರಿಕೆಡ್ಗಳನ್ನು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Problems
ಉಡುಪಿ : ಪ್ರತಿ ವರ್ಷ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮೂಳೂರಿನ ತೊಟ್ಟಂ ಪ್ರದೇಶ ಕಡಲ್ಕೊರೆತ ಉಂಟಾಗುವ ಪ್ರದೇಶವಾಗಿದ್ದು, ಹಲವಾರು ತೆಂಗಿನಮರಗಳು ಬಲಿಯಾಗುತ್ತಿವೆ ಆಸ್ತಿ ಪಾಸ್ತಿ ಹಾನಿ ಹಾಗೂ ಜನಜೀವನ ಅಸ್ತವ್ಯಸ್ತತೆಗೆ ಕಾರಣವಾಗುತ್ತದೆ.
ಈ ಪ್ರದೇಶಕ್ಕೆ ಮಾನ್ಯ ತಹಶಿಲ್ದಾರ್ ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲಿಸಿದರು. ತಡೆಗೋಡೆ ನಿರ್ಮಿಸಲು ಮತ್ತು ಜಾರುತ್ತಿರುವ ಬ್ರೇಕ್ ವಾಟರ್ ಕಲ್ಲುಗಳನ್ನು ವ್ಯವಸ್ಥಿತಗೊಳಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ರವರಿಗೆ ಸೂಚನೆ ನೀಡಲಾಗಿದೆ. ಹಾಗೂ ಅಲ್ಲಿನ ನಿವಾಸಿಗಳಿಗೆ ಕಡಲ್ಕೊರೆತದ ಪರಿಸ್ಥಿತಿಯ ಕುರಿತು ತಿಳುವಳಿಕೆ ನೀಡಿದೆ.
ಸಸ್ಯವರ್ಗದ ಉಪಸ್ಥಿತಿಯು ಸಮುದ್ರದ ಸವೆತ, ಚಂಡಮಾರುತದಂಥ ಬಿರುಗಾಳಿಗಳಿಗೆ ನೈಸರ್ಗಿಕ ನಿರೋಧಕವಾಗಿದೆ ಎಂದು ಸಾಬೀತಾಗಿದೆ ಎಂಬುದನ್ನು ಗಮನಿಸಲಾಗಿದೆ. ಆದ್ದರಿಂದ ನಾವು ಕಡಲ್ಕೊರೆತ ಎದುರಿಸಲು ಸಮರ್ಥನೀಯ ಕ್ರಮವಾಗಿ ಜೈವಿಕ ತಡೆಗೋಡೆಯಾಗಿ ಜೈವಿಕ ರಕ್ಷಾಕವಚವನ್ನು ನಿರ್ಮಿಸಬಹುದಾಗಿದೆ.
ಈ ಕ್ರಮದ ಕುರಿತು ಶೀಘ್ರದಲ್ಲೇ ಬಂದರು ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಪತ್ರಿಕೆಗೆ ತಿಳಿಸಿದ್ದಾರೆ.
ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಲೋಕನಾಥ್ ಅವರು ಸ್ಥಳ ಪರಿಶೀಲನೆಗೆ ಸಾತ್ ನೀಡಿದರು.
ಮಳೆಗಾಲದ ವಿಪತ್ತು ನಿರ್ವಹಣೆಗೆ ಕ್ರಮ ವಹಿಸಿ : ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ
ಉಡುಪಿ : ಮಳೆಗಾಲ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಮಳೆಗೆ ಸಂಬಂದಿಸಿದ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರಿಸ್ಥಿತಿ ನಿರ್ವಹಣೆಗೆ ತುರ್ತಾಗಿ ಸ್ಪಂದಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರ ಉಪಸ್ಥಿತಿಯಲ್ಲಿ 19 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಸಭೆ ನಡೆಸಿದರು.
ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಸಹಿತ ಎಲ್ಲಾ ರಸ್ತೆಗಳ ತೋಡು ಹೂಳೆತ್ತುವುದು, ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿ ಅಗತ್ಯ ಸಲಕರಣೆ ಒದಗಿಸುವುದು, ಮಳೆ ಹಾನಿ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ಕ್ರಮ ಹಾಗೂ ಸಂತ್ರಸ್ತ ಅರ್ಹ ಕುಟುಂಬಗಳಿಗೆ ಗರಿಷ್ಠ ಪರಿಹಾರ ಮಂಜೂರು ಮಾಡಲು ಆದ್ಯತೆ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಅಂಗನವಾಡಿ, ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ, ಕಳೆದ ವರ್ಷ ಮಳೆ ಹಾನಿಗೀಡಾದ ಬಾಕಿ ಪರಿಹಾರ ಮೊತ್ತ ಬಿಡುಗಡೆ, ವಿದ್ಯುತ್ ಸರಬರಾಜು ವ್ಯತ್ಯಯವಾಗದಂತೆ ಮೆಸ್ಕಾಂ ಇಲಾಖೆ ಹಾಗೂ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಮಾಡುವಂತೆ ಹೇಳಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಲೈಸನ್ಸ್, 9/11, ಜಾತಿ ಆದಾಯ ಪ್ರಮಾಣ ಪತ್ರ, ಸಣ್ಣ ರೈತ, ತ್ಯಾಜ್ಯ ನಿರ್ವಹಣೆ ಸಹಿತ ಸಾರ್ವಜನಿಕರ ಕಡತಗಳನ್ನು ಪರಿಶೀಲಿಸಿ ಶೀಘ್ರ ವಿಲೇವಾರಿಗೆ ಅಗತ್ಯ ಕ್ರಮ ವಹಿಸಲು ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಗುರುರಾಜ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಜಯ ಹಾಗೂ ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ಇಬ್ರಾಹಿಂಪುರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆದಿ ಉಡುಪಿ ಮೀನು ಮಾರುಕಟ್ಟೆಯಲ್ಲಿ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯಲ್ಲಿರುವ ಸಾರ್ವಜನಿಕ ಶೌಚಾಲಯ
ಉಡುಪಿ : ಆದಿಉಡುಪಿ ಮೀನು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯವು ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬುವಾಸನೆಯಿಂದ ನಾರುತ್ತಿದ್ದು ಸಾರ್ವಜನಿಕರು ಮೂತ್ರಬಾಧೆ ತೀರಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಶೌಚಾಲಯ ಕೊಠಡಿ ಶುಚಿಗೊಳಿಸದೆ ಹಲವು ತಿಂಗಳುಗಳೇ ಕಳೆದಿದ್ದು. ಮದ್ಯದ ಬಾಟಲಿಗಳಿಂದ ತುಂಬಿಕೊಂಡಿದಲ್ಲದೆ, ಗೋಡೆಗಳ ಬಣ್ಣವು ಮಾಸಿದ್ದು, ಜೇಡರ ಬಲೆಗಳು ಆವರಿಸಿಕೊಂಡಿದೆ. ಮಾರಕ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ಶೌಚಾಲಯವು ಸುಸ್ಥಿತಿಯಲ್ಲಿ ಇಲ್ಲದೆ, ಮೀನು ಮಾರುಕಟ್ಟೆಗೆ ಬರುವ ಗ್ರಾಹಕರು, ಮೀನು ವ್ಯಾಪಾರಸ್ಥರು ಬಹಳವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಶುಚಿತ್ವ ನಿರ್ವಹಣೆ ಇಲ್ಲದೆ ಶೌಚಾಲಯ ಪಾಳುಬಿದ್ದಿದೆ. ನಗರಸಭೆ ತಕ್ಷಣ ಇಲ್ಲಿಯ ಅವ್ಯವಸ್ಥೆಯಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಸೂಕ್ತಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ.
ಉಡುಪಿ : ಎರಡೇ ದಿನ ಅಂತರದಲ್ಲಿ ಉಡುಪಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಇಂದ್ರಾಳಿಯಲ್ಲಿ ರಸ್ತೆ ವಿಭಜಕವಾಗಿ ಇರಿಸಲಾಗಿದ್ದ ಕಲ್ಲುಗಳಿಗೆ ಢಿಕ್ಕಿ ಹೊಡೆದು ಪಲ್ಟಿಯಾಯ್ತು. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡರು. ಕಾರು ಪಲ್ಟಿಯಾಗುವ ಸಂದರ್ಭ ದೊಡ್ಡ ಕಲ್ಲೊಂದು ಬೈಕಿನತ್ತ ಚಿಮ್ಮಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕನ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯಲ್ಲಿ ರಸ್ತೆ ಮಧ್ಯೆ ವಿಭಜಕವಾಗಿ ಕಲ್ಲುಗಳನ್ನು ಇರಿಸಲಾಗಿದೆ. ಇತ್ತೀಚೆಗೆ ಆ ಕಲ್ಲುಗಳನ್ನು ಎಲ್ಲೆಂದರಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಟ್ರಾಫಿಕ್ ಪೊಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಲಕ್ಷಕ್ಕೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಉಡುಪಿ : ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ತುರ್ತು ವಿಲೇವಾರಿಗೆ ಆದ್ಯತೆ ನೀಡುವಂತೆ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭೆಯಲ್ಲಿ ಇ – ಖಾತಾ ಅರ್ಜಿಗಳ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದ್ದು, ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಹಲವು ಬಾರಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ.
ಮನೆ ಹಾಗೂ ವಾಣಿಜ್ಯ ಕಟ್ಟಡಗಳ ತೆರಿಗೆ ಪಾವತಿಗೆ ಸೂಕ್ತ ವ್ಯವಸ್ಥೆ, ಸರ್ವರ್ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬೇಕು. ನಗರಸಭೆಗೆ ಸಂಬಂಧಿಸಿದ ಜಾಗಗಳನ್ನು ಗುರುತಿಸಿ ಸುಪರ್ದಿಗೆ ಪಡೆಯಲು ಕ್ರಮ ವಹಿಸಬೇಕು.
ವಿವಿಧ ಮೂಲಗಳ ತೆರಿಗೆ ಸಂಗ್ರಹದ ಜೊತೆಗೆ ಬಾಕಿ ಇರುವ ತೆರಿಗೆ ಸಂಗ್ರಹಣೆಗೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ರಿಕ್ಷಾ ನಿಲ್ದಾಣ, ಬಸ್ ನಿಲ್ದಾಣ ನಿರ್ಮಾಣ, ವಾಣಿಜ್ಯ ಸಂಕೀರ್ಣಗಳ ನಿರ್ವಹಣೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಹೇಳಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತರಾದ ರಾಯಪ್ಪ, ಕಂದಾಯ ಅಧಿಕಾರಿ ಸಂತೋಷ್, ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಎಬಿವಿಪಿ ಆಗ್ರಹಕ್ಕೆ ಮೊದಲ ಹಂತದ ಸ್ಪಂದನೆ : ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಗ್ರಾಮಾಂತರ ಭಾಗಗಳಿಂದ ಕುಂದಾಪುರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಐದು ದಿನಗಳ ಹಿಂದೆ (8-6-2024) ಶಾಸ್ತ್ರಿ ಸರ್ಕಲ್ನಿಂದ ತಾಲೂಕು ಆಫೀಸಿನವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿ, ಕುಂದಾಪುರ ತಹಶೀಲ್ದಾರ, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಸೇರಿದಂತೆ, ಕುಂದಾಪುರ ಮತ್ತು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಆಗ್ರಹವನ್ನು ಇರಿಸಿ ಎಚ್ಚರಿಸಿದರು. ಇದರ ಪರಿಣಾಮ ಮೊದಲ ಹಂತದಲ್ಲಿ ಎಬಿವಿಪಿ ಬೇಡಿಕೆಯಂತೆ ಆಜ್ರಿಯಿಂದ ಕುಂದಾಪುರಕ್ಕೆ ಬಸ್ ಬಿಟ್ಟಿರುವುದು ಶ್ಲಾಘನೀಯ.
ಈಗಾಗಲೇ ಆಜ್ರಿಯಿಂದ ನೇರಳಕಟ್ಟೆ ತಲ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಮಾಡಿದ ಬಸ್ ವ್ಯವಸ್ಥೆಯಿಂದಾಗಿ ಕೇವಲ ವಿದ್ಯಾರ್ಥಿಗಳಿಗಲ್ಲದೆ ಸಾರ್ವಜನಿಕರಿಗೂ ಸಹಾಯಕವಾಗಿದೆ. ಅನೇಕ ಸಮಯದಿಂದ ಈ ಮಾರ್ಗಕ್ಕೆ ಬಸ್ನ ಬೇಡಿಕೆ ಇದ್ದರೂ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಮನವಿ ಸಲ್ಲಿಸಿದರೂ ಸಮರ್ಪಕ ಬಸ್ ವ್ಯವಸ್ಥೆ ಮಾಡದ ಅಧಿಕಾರಿಗಳು ಹೋರಾಟ ನಡೆಸಿದ ಐದು ದಿನಗಳ ಒಳಗೆ ಬಸ್ ಬಿಟ್ಟಿರುವುದು ವಿದ್ಯಾರ್ಥಿಗಳ ಧ್ವನಿಯ ಬೆಲೆಯನ್ನು ಸಾರುತ್ತದೆ
ಇನ್ನು ಸುಮಾರು 15ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಮಾಡುವ ಅವಶ್ಯಕತೆ ಇದ್ದು ಆದಷ್ಟು ಬೇಗ ಇದು ಆಗುವಂತೆ ಮಾರ್ಗದ ಅವಶ್ಯಕತೆಯ ಕುರಿತು ಈಗಾಗಲೇ ಎಬಿವಿಪಿ ವಿದ್ಯಾರ್ಥಿಗಳ ಆಗ್ರಹದ ಧ್ವನಿಯಾಗಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದೆ ಮತ್ತು ಮುಂದೆ ಬರುವ 15 ದಿನಗಳ ಒಳಗೆ ಎಲ್ಲಾ ಮಾರ್ಗಗಳಿಗೆ ಬಸ್ ವ್ಯವಸ್ಥೆ ಆಗುವ ಭರವಸೆಯೂ ಇದೆ.
ಉಡುಪಿ : ಬಡಾನಿಡಿಯೂರು ಗ್ರಾಮ ಪಂಚಾಯತ್ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಪಂಚಾಯತ್ ಕಚೇರಿಗೆ ಬೀಗ ಜಡಿದು ಪಿಡಿಓ ಮಾಲತಿ ಅವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಡಾನಿಡಿಯೂರು ಗ್ರಾಪಂನಲ್ಲಿ ಕಳೆದ 6 ವರ್ಷದಿಂದ ಸೇವೆ ಸಲ್ಲಿಸಿ ಸರಕಾರದ ಆದೇಶದಂತೆ ವರ್ಗಾವಣೆಗೊಂಡ ಪಿಡಿಓ ಮಾಲತಿ ಅವರು, ಕೋರ್ಟ್ ಮೊರೆ ಹೋಗಿ ಮತ್ತೆ ಅದೇ ಗ್ರಾ. ಪಂ.ಗೆ ವಾಪಸು ವರ್ಗಾವಣೆ ಮಾಡಿಕೊಂಡು ಅಧಿಕಾರ ವಹಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ಗ್ರಾಮಸ್ಥರು ಪಕ್ಷಬೇಧ ಮರೆತು ಪ್ರತಿಭಟನೆ ನಡೆಸಿದರು.
ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಸಾಲ್ಯಾನ್ ಮಾತನಾಡಿ, ಗ್ರಾಮದ ಯಾವುದೇ ಕೆಲಸಗಳು ನಡೆಯದ ಹಿನ್ನಲೆಯಲ್ಲಿ ಪಿಡಿಒ ಮಾಲತಿ ಬಗ್ಗೆ ಗ್ರಾಮಸ್ಥರ ವಿರೋಧವಿದೆ. ಅವರು ಜನಪರವಾಗಿ ಇರಲಿಲ್ಲ, ಜನವಿರೋಧಿ ನೀತಿಯನ್ನು ಅನುಸರಿಸುವ ಪಿಡಿಒ ನಮಗೆ ಬೇಡ ಎಂದು ಹೇಳಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಉಡುಪಿ : ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆ ನಿರ್ಮಾಣ ಹಂತದಲ್ಲಿರುವ ಕೆರೆಯ ದಂಡೆ ಈಗ ಮತ್ತೆ ಕುಸಿದಿದೆ.
ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಹೀಗಾಗಿದೆ. ಈ ಕೆರೆ ದಂಡೆ ನಿರ್ಮಾಣ ಕಾರ್ಯ ಆರಂಭದಿಂದ 4ನೇ ಬಾರಿಗೆ ಕುಸಿಯುತ್ತಿದೆ. ಸರಕಾರ 2 ಕೋ.ರೂ. ಅನುದಾನವನ್ನು ನೀಡಿದ್ದು, ಅನುದಾನವನ್ನು ನೀರಲ್ಲಿ ಹೋಮ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಕೆರೆ ನಿರ್ಮಾಣಕ್ಕೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ, ಮಣ್ಣು ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡದೆ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಈ ರೀತಿ ದುರಂತ ಸಂಭವಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಣ್ಣನೀರಾವರಿ ಇಲಾಖೆ ವತಿಯಿಂದ ಕಾಮಗಾರಿ ನಿರ್ವಹಿಸಲಾಗುತ್ತಿದ್ದು, ತತ್ಕ್ಷಣ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 160 A ಕಾಮಗಾರಿ ವೀಕ್ಷಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ : ಉಡುಪಿ – ಮಣಿಪಾಲ – ಪರ್ಕಳ – ಆತ್ರಾಡಿ – ಹಿರಿಯಡಕ – ಪೆರ್ಡೂರು ಮುಖ್ಯ ರಸ್ತೆ (ರಾಷ್ಟ್ರೀಯ ಹೆದ್ದಾರಿ 160 A) ಕಾಮಗಾರಿ ಪ್ರಗತಿಯಲ್ಲಿದ್ದು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಹಿರಿಯಡಕ, ಪೆರ್ಡೂರು, ಆತ್ರಾಡಿ ಭಾಗದ ವಿವಿಧ ಕಡೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ನಿರಂತರ ಮಳೆಯಾಗುತ್ತಿರುವುದರಿಂದ ಮಳೆ ನೀರು ಹಾದು ಹೋಗಲು ಸಮರ್ಪಕವಾದ ಚರಂಡಿ ನಿರ್ಮಿಸಿ ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನಾ, ಉಪಾಧ್ಯಕ್ಷರಾದ ದೇವು ಪೂಜಾರಿ, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್, ಸಹಾಯಕ ಅಭಿಯಂತರರಾದ ಮಂಜುನಾಥ್ ನಾಯಕ್, 80 ಬಡಗಬೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸಂದೀಪ್, ಬೊಮ್ಮರಬೆಟ್ಟು, ಪೆರ್ಡೂರು, ಆತ್ರಾಡಿ ಗ್ರಾಮ ಪಂಚಾಯತ್ ಸದಸ್ಯರು, ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.