ಉಡುಪಿ : ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿಗಳ ವಿರುದ್ಧ ಗರಂ ಆಗಿರುವ ಕಾಂಗ್ರೆಸ್ ಕಾರ್ಯಕರ್ತರು, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ʼಗೋ ಬ್ಯಾಕ್ʼ ಅಭಿಯಾನ ಕೈಗೊಂಡಿದ್ದಾರೆ. ಈ ಸಂಬಂಧ
ಸಾಮಾಜಿಕ ಜಾಲತಾಣದಲ್ಲಿ ‘ಗೋ ಬ್ಯಾಕ್ʼ ಅಭಿಯಾನದ ಸದ್ದು ಜೋರಾಗಿದೆ. ಮುಖ್ಯವಾಗಿ ಉಡುಪಿಯ ಕೈ ಕಾರ್ಯಕರ್ತರು
ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗರಂ ಆಗಲು ಇನ್ನೊಂದು ಕಾರಣ ಅವರು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ್ದು. ಚುನಾವಣೆ ಘೋಷಣೆ ಆದಾಗಿನಿಂದ ಹೆಬ್ಬಾಳ್ಕರ್ ಜಿಲ್ಲೆಗೇ ಕಾಲಿಟ್ಟಿರಲಿಲ್ಲ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಈ ಎಲ್ಲ ಸಿಟ್ಟನ್ನು ಕೈ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಹೊರ ಹಾಕಿದ್ದಾರೆ. ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆಯೂ ಒತ್ತಾಯ ಮಾಡಿದ್ದಾರೆ.
Politics
ಉಡುಪಿ : ಉಚ್ಚಾಟನೆಗೊಂಡರೂ ಮಾಜಿ ಶಾಸಕ ರಘುಪತಿ ಭಟ್ಗೆ ಬಿಜೆಪಿ ಪಕ್ಷದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಎದ್ದಿರುವ ಭಟ್ ಅವರನ್ನು ಇತ್ತೀಚೆಗಷ್ಟೆ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಕರಾವಳಿಯಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ವಿಜಯೀ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಕ್ಷೇತ್ರದ ಕ್ಯಾ. ಬ್ರಜೇಶ್ ಚೌಟ, ಶಿವಮೊಗ್ಗ ಕ್ಷೇತ್ರದ ಬಿ.ವೈ. ರಾಘವೇಂದ್ರ ಹಾಗೂ ಉತ್ತರ ಕನ್ನಡ ಕ್ಷೇತ್ರದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಾವೇರಿ ಕ್ಷೇತ್ರದ ಬೊಮ್ಮಾಯಿ, ಬೆಳಗಾವಿ ಕ್ಷೇತ್ರದ ಜಗದೀಶ್ ಶೆಟ್ಟರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ರಘುಪತಿ ಭಟ್ ಅವರ ಪತ್ನಿ ಕೋಟ ಶ್ರೀನಿವಾಸ ಪೂಜಾರಿ ಅವರ ವಿಜಯದ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಮಹಿಳಾ ಕಾರ್ಯಕರ್ತೆಯರ ಜೊತೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.


ನವಯುಗ ನವಪಥದ ಆಧಾರದಲ್ಲಿ ದ.ಕ. ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆ – ಬ್ರಿಜೇಶ್ ಚೌಟ
ಮಂಗಳೂರು : ನವಯುಗ ನವಪಥದ ಆಧಾರದಲ್ಲಿ ಹಿಂದುತ್ವಕ್ಕೆ ಬದ್ಧತೆಯಿರಿಸಿ, ಅಭಿವೃದ್ಧಿಯನ್ನು ಆದ್ಯತೆಯಾಗಿರಿಸಿ ದ.ಕ.
ಜಿಲ್ಲೆಯಲ್ಲಿ ಹೊಸಪರ್ವ, ಹೊಸಕನಸು, ಹೊಸ ಆಶೋತ್ತರಗಳನ್ನು ಜನರ ಮಧ್ಯೆ ಹುಟ್ಟಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ ಎಂದು ದ.ಕ.ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದರು.
ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಂತೆ ಸುರತ್ಕಲ್ನ ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆಯ ಬಿಜೆಪಿಯ ಗೆಲುವು, ಮೋದಿಯವರ, ಹಿಂದುತ್ವದ, ಸಂಘಟನೆಯ ಕಾರ್ಯಕರ್ತರ, ಜಿಲ್ಲಾಧ್ಯಕ್ಷರ ಗೆಲುವು. ಸತ್ಯ, ಧರ್ಮ, ನ್ಯಾಯ, ಹಿಂದುತ್ವದ ಆಧಾರದಲ್ಲಿ ನಾವು ಜಿಲ್ಲೆಯಲ್ಲಿ ಸ್ಪರ್ಧೆ ಮಾಡಿದ್ದೆವು. ತುಳುನಾಡಿನ ದೈವ ದೇವರ ಆಶೀರ್ವಾದದ ಬಲದಿಂದ, ಕಾರ್ಯಕರ್ತರ ಪರಿಶ್ರಮ, ಸಂಘಟನೆಯ ಹಿರಿಯರ ಮಾರ್ಗದರ್ಶನದಿಂದ, ರಾಜ್ಯ ಹಾಗೂ ಕೇಂದ್ರದ ನಾಯಕರ ಬೆಂಬಲದೊಂದಿಗೆ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ ಎಂದರು.
ಈ ಚುನಾವಣೆಯನ್ನು ಕಾಂಗ್ರೆಸ್ ಎಸ್ಡಿಪಿಐ ಒಟ್ಟಾಗಿ ಎದುರಿಸಿದೆ. ಆದರೆ ಚುನಾವಣಾ ಅಂತರದ ಬಗ್ಗೆ ಬಳಿಕ ಮಾಹಿತಿ ನೀಡುತ್ತೇನೆ ಎಂದು ಬ್ರಿಜೇಶ್ ಚೌಟ ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆ : ಕಾಪು ಮಂಡಲ ಬಿಜೆಪಿ ವತಿಯಿಂದ ಅಭಿನಂದನೆ
ಕಾಪು : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಾಪು ಮಂಡಲ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ 32 ಸಾವಿರಕ್ಕೂ ಅಧಿಕ ಅಂತರ ದೊರಕಿದೆ. ಈ ಗೆಲುವಿಗೆ ಶ್ರಮಿಸಿದ ದೇವದುರ್ಲಭ ಕಾರ್ಯಕರ್ತರಿಗೆ ಶಾಸಕನ ನೆಲೆಯಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಪ್ರಥ್ವಿರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಮಟ್ಟು, ಕಾಪು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಹ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ ಸೈಂಟ್ ಸಿಸಿಲಿಸ್ ಶಾಲಾ ಆವರಣದಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಮತದಾರರ ವಿವರಗಳು :
- ಒಟ್ಟು ಮತದಾರರು: 15,85,162
- ಮತದಾನ ಮಾಡಿದವರು: 12,22,888
- ಶೇ. ಮತದಾನ: 77.15% (2019ರೊಂದಿಗೆ ಹೋಲಿಸಿದರೆ 1.08% ಹೆಚ್ಚಳ)
- ಪುರುಷ ಮತದಾರರು: 7,68,215
- ಮಹಿಳಾ ಮತದಾರರು: 8,16,910
- ಮತದಾನ ಮಾಡಿದ ಪುರುಷರು: 5,94,565
- ಮತದಾನ ಮಾಡಿದ ಮಹಿಳೆಯರು: 6,28,316
- ಇತರರು: 37
- ಒಟ್ಟು ಮತಗಟ್ಟೆ ಸಂಖ್ಯೆ: 1,842
ಮತ ಎಣಿಕೆ ವಿವರಗಳು :
- ಮಿನಿಮಮ್ 15 – ಮ್ಯಾಕ್ಸಿಮಮ್ 19 ರೌಂಡ್
- ಒಟ್ಟು ಮತ ಎಣಿಕೆ ಟೇಬಲ್: 112
- ಮತ ಎಣಿಕೆ ಸುತ್ತ: 135
- ಒಟ್ಟು ಎಣಿಕೆ ಪ್ರಕ್ರಿಯೆ ನಡೆಯುವ ಕೊಠಡಿಗಳು: 12
ಮತ ಎಣಿಕೆಯ ಕೋಣೆಗಳು :
- ಕುಂದಾಪುರ: ಟೇಬಲ್ 14-16, ರೌಂಡ್ 1 ಕೊಠಡಿ
- ಉಡುಪಿ: ಟೇಬಲ್ 14-17, ರೌಂಡ್ 2 ಕೊಠಡಿ
- ಕಾಪು: ಟೇಬಲ್ 14-15, ರೌಂಡ್ 2 ಕೊಠಡಿ
- ಕಾರ್ಕಳ: ಟೇಬಲ್ 14-15, ರೌಂಡ್ 1 ಕೊಠಡಿ
- ಶೃಂಗೇರಿ: ಟೇಬಲ್ 14-19, ರೌಂಡ್ 1 ಕೊಠಡಿ
- ಮೂಡಿಗೆರೆ: ಟೇಬಲ್ 14-17, ರೌಂಡ್ 2 ಕೊಠಡಿ
- ಚಿಕ್ಕಮಗಳೂರು: ಟೇಬಲ್ 14-19, ರೌಂಡ್ 2 ಕೊಠಡಿ
- ತರೀಕೆರೆ: ಟೇಬಲ್ 14-17, ರೌಂಡ್ 1 ಕೊಠಡಿ
ಪೋಸ್ಟಲ್ ಮತದಾನ :
- ಪೋಸ್ಟಲ್ ಮತಗಳು: 7,853
- ಹಿರಿಯ ನಾಗರಿಕರ ಮನೆಮನೆ ಮತದಾನ: 264
- ಒಟ್ಟು: 8,117
- ಮತದಾನ ಕೇಂದ್ರದ 1 ಕೊಠಡಿಯಲ್ಲಿ 16 ಟೇಬಲ್ನಲ್ಲಿ ಎಣಿಕೆ ಪ್ರಕ್ರಿಯೆ
2019ರ ಲೋಕಸಭಾ ಚುನಾವಣಾ ಫಲಿತಾಂಶ :
- ಶೇ. 76.07 ಮತದಾನ
- ಶೋಭಾ ಕರಂದ್ಲಾಜೆ: 7,18,916
- ಪ್ರಮೋದ್ ಮಧ್ವರಾಜ್: 3,69,317
- ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಮತ ಎಣಿಕೆಗಾಗಿ ಏರ್ಪಾಡು :
ಮತ ಎಣಿಕೆಯ ಪ್ರಕ್ರಿಯೆ ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಣಿಪಾಲದಲ್ಲಿ ನಿನ್ನೆ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ತಡೆ ನೀಡಲು ಕ್ರಮಕೈಗೊಳ್ಳಲಾಗಿದೆ.
ಎಚ್ಚರಿಕೆ:
ಅಕ್ರಮ ಚಟುವಟಿಕೆ, ಮಾದಕ ದ್ರವ್ಯಗಳ ಬಳಕೆ ಮತ್ತು ಅವ್ಯವಸ್ಥೆಯನ್ನು ತಡೆಯಲು ಸರ್ಕಾರದ ಮತ್ತು ಪೊಲೀಸರ ಕಾರ್ಯಾಚರಣೆಗಳು ನಿರಂತರವಾಗಿವೆ.
ದ.ಕ.ಜಿಲ್ಲಾ ಎಸ್ಪಿಯಿಂದ ಕಾಂಗ್ರೆಸ್ ವಕ್ತಾರನಂತೆ ಹೇಳಿಕೆ – ಶಾಸಕ ಹರೀಶ್ ಪೂಂಜಾ ಆರೋಪ
ಮಂಗಳೂರು : ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಓರ್ವ ಐಎಎಸ್ ಅಧಿಕಾರಿಯಂತೆ ಹೇಳಿಕೆ ನೀಡುವ ಬದಲು ಧರ್ಮಸ್ಥಳದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರನಂತೆ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ನಗರದ ಖಾಸಗಿ ಹೊಟೇಲ್ನಲ್ಲಿ ಮಾತನಾಡಿದ ಅವರು, ನನ್ನ ಮನೆಗೆ ಅಂದು ಮೂವರು ಪೋಲಿಸರು ನೋಟಿಸ್ ನೀಡಲು ಬಂದಿದ್ದರು ಅವರು ಹೇಳಿದ್ದಾರೆ. ಆದರೆ ಎಷ್ಟು ಮಂದಿ ಬಂದಿದ್ದಾರೆಂದು ನಮ್ಮ ಮನೆಯ ಸಿಸಿ ಟಿವಿ ಪರಿಶೀಲನೆ ನಡೆಸಿದರೆ ಗೊತ್ತಾಗುತ್ತದೆ. ಮೂರು ವಾಹನದಲ್ಲಿ 15ಕ್ಕೂ ಅಧಿಕ ಪೊಲೀಸರು ಬಂದಿದ್ದರು. ನನ್ನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದರು. ಆದರೆ ಕಾನೂನು ಪ್ರಕಾರ ಅವರು ನನಗೆ ನೋಟಿಸ್ ನೀಡಲಿಲ್ಲ. ಆದರೆ ಪೊಲೀಸ್ ಠಾಣೆಗೆ ಬರಬೇಕೆಂದು ಬೆಳಗ್ಗೆಯಿಂದ ಸಂಜೆ ಏಳರವರೆಗೆ ದೌರ್ಜನ್ಯ ಮಾಡಿದ್ದಾರೆ ಎಂದರು.
ಶಶಿರಾಜ್ ಶೆಟ್ಟಿ ಅಮಾಯಕ. ಅವನನ್ನು ಹೇಗೆ ಜೈಲಿಗೆ ಹಾಕಿದ್ದಾರೆ. ಎಸ್ಪಿಯವರು ಆಮೇಲೆ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ದೇಶದಲ್ಲಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆದೇ ಇಲ್ಲವೇ. ಕಲ್ಲು ಗಣಿಗಾರಿಕೆ ನಡೆದದ್ದು ಯಾವ ಸ್ಥಳದಲ್ಲಿ ಇದೆ ಅನ್ನೋದನ್ನು ತನಿಖೆ ಮಾಡಬೇಕೆಂದು ಎಸ್ಪಿ ಹೇಳಿದ್ದಾರೆ. ಆ್ಯಪ್ನಲ್ಲಿ ನೋಡಿದ್ದಲ್ಲಿ ಗೊತ್ತಾಗುದಿಲ್ವಾ. ಅಂತಹ ಸಾಮಾನ್ಯ ಜ್ಞಾನ ಎಸ್ಪಿ ಅವರಿಗೆ ಇಲ್ವಾ. ಅಲ್ಲದೆ ನನ್ನ ಮೇಲೆ ಮೂರು ದಿನಗಳಲ್ಲೇ ಜಾರ್ಜ್ ಶೀಟ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ : ಮಂಗಳವಾರ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದ್ದು, ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ, ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು. ಇವಿಎಂಗಳ ಎಣಿಕೆ ನಂತರ ವಿವಿಪ್ಯಾಟ್ನ ಸ್ಲಿಪ್ಗಳ ಎಣಿಕೆ ಮಾಡಲಾಗುವುದು. ಮತ ಎಣಿಕೆಗೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಪಕ್ಷಗಳ ಎಜೆಂಟರು ಸೇರಿದಂತೆ ಎಲ್ಲರಿಗೂ ಮತದಾನ ಕೇಂದ್ರದಲ್ಲಿಯೇ ಊಟ-ಉಪಹಾರ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ವಿವಿಪ್ಯಾಟ್ ಸ್ಲಿಪ್ಗಳ ಎಣಿಕೆ ನಂತರ ಅಂತಿಮ ಫಲಿತಾಂಶವನ್ನು ಘೋಷಿಸಲಾಗುವುದು. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ತಲಾ ಐದರಂತೆ ಒಟ್ಟು 40 ವಿವಿ ಪ್ಯಾಟ್ಗಳನ್ನು ಲಾಟ್ಸ್ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ – ಮತ ಎಣಿಕೆಗೆ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ ಸಿದ್ಧತೆಗಳು ಪೂರ್ಣ
ಉಡುಪಿ : ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ ನಡೆಯಲಿದೆ. ವಿಧಾನಸಭಾ ಕ್ಷೇತ್ರವಾರು ಒಟ್ಟು 12,31,005 ಮತಗಳ ಎಣಿಕೆ ನಡೆಯಲಿದೆ.
ಕುಂದಾಪುರ, ಕಾರ್ಕಳ, ಶೃಂಗೇರಿ ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಎರಡು ಎಣಿಕೆ ಕೊಠಡಿಗಳನ್ನು ನಿಗದಿಪಡಿಸಲಾಗಿದ್ದು, ಉಡುಪಿ, ಕಾಪು, ಮೂಡಿಗೆರೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದು ಕೊಠಡಿಯನ್ನು ನಿಗದಿಪಡಿಸಲಾಗಿದೆ. ಎರಡು ಎಣಿಕೆ ಕೊಠಡಿಗಳಲ್ಲಿ ತಲಾ ಏಳು ಟೇಬಲ್ಗಳು ಮತ್ತು ಒಂದು ಎಣಿಕೆ ಕೊಠಡಿ 14 ಟೇಬಲ್ಗಳನ್ನು ಹೊಂದಿರುತ್ತದೆ. ಇವಿಎಂ ಯಂತ್ರಗಳಲ್ಲಿನ ಮತ ಎಣಿಕೆಯನ್ನು ಜಿಲ್ಲಾ ಚುನಾವಣಾಧಿಕಾರಿ, ಎಂಟು ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ನಾಲ್ವರು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಅಂಚೆ ಮತಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಎಣಿಕೆ ಮಾಡಲಾಗುತ್ತಿದ್ದು, ಸೇವಾ ಮತಗಳನ್ನು ಪ್ರತ್ಯೇಕ ಟೇಬಲ್ನಲ್ಲಿ ಎಣಿಸಲಾಗುತ್ತದೆ. ಮತ ಎಣಿಕೆ ಸಿಬ್ಬಂದಿಗೆ ಟೇಬಲ್ಗಳ ಹಂಚಿಕೆಯನ್ನು ಯಾದೃಚ್ಛಿಕವಾಗಿ ಮಾಡಲಾಗುತ್ತದೆ. ಅಭ್ಯರ್ಥಿಯು ಪ್ರತಿ ಟೇಬಲ್ಗೆ ಏಜೆಂಟರನ್ನು ನೇಮಿಸಲು ಅವಕಾಶ ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ, ದೂರು ದಾಖಲಿಸಲು ಮತ್ತು ಎಣಿಕೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಕಂಟ್ರೋಲ್ ರೂಂ, ಜೂನ್ 1 ರಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಾರಂಭ ಮಾಡುತ್ತಿದ್ದು, ಅಂಚೆ ಮತಗಳ ಎಣಿಕೆ ಮುಗಿದ ನಂತರವೇ ಫಲಿತಾಂಶ ಪ್ರಕಟವಾಗಲಿದೆ. ಇವಿಎಂನಲ್ಲಿ ದಾಖಲಾದ ಮತಗಳು ಮತ್ತು ಮತ ಎಣಿಕೆ ವೀಕ್ಷಕ ಹಿತೇಶ್ ಕೋಯಾ ಅವರ ಅನುಮೋದನೆ ಪಡೆದ ನಂತರ ಚುನಾವಣಾ ಆಯೋಗದ ಒಪ್ಪಿಗೆ ಪಡೆದ ನಂತರವೇ ವಿಜೇತ ಅಭ್ಯರ್ಥಿ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.
ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತೆ ಇರಲಿದೆ. ಮತ ಎಣಿಕೆ ಕೇಂದ್ರದ 100 ಮೀಟರ್ ವ್ಯಾಪ್ತಿ ಪಾದಚಾರಿ ವಲಯವಾಗಲಿದ್ದು, ಈ ವಲಯದಲ್ಲಿ ವಾಹನಗಳ ಓಡಾಟ ಇರುವುದಿಲ್ಲ. ಮತ ಎಣಿಕೆ ಸಭಾಂಗಣ ಹಾಗೂ ಮತ ಎಣಿಕೆ ಕೇಂದ್ರದ ಇತರ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉಡುಪಿ ಜಿಲ್ಲೆಯಾದ್ಯಂತ ವಿಜಯೋತ್ಸವ ಆಚರಣೆ ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.
ಡಾ| ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಗೆಲುವು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಲಿ : ಯಶ್ಪಾಲ್ ಎ. ಸುವರ್ಣ
ಉಡುಪಿ : ಚುನಾವಣಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಸತತ 3ನೇ ಬಾರಿಗೆ ಅಧಿಕಾರಕ್ಕೆರಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರ ದೊಡ್ಡ ಅಂತರದ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಡುಗೆ ನೀಡೋಣ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.
ಅವರು ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಉಡುಪಿ ನಗರ ಮತ್ತು ಗ್ರಾಮಾಂತರ ಮಂಡಲದ ವಿಧಾನ ಪರಿಷತ್ ಚುನಾವಣಾ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿವೃದ್ಧಿಯ ಹರಿಕಾರ, ನವ ಉಡುಪಿಯ ನಿರ್ಮಾತೃ ಕೀರ್ತಿಶೇಷ ಡಾ| ವಿ.ಎಸ್. ಆಚಾರ್ಯರವರ ಬಳಿಕ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷ ಮಗದೊಮ್ಮೆ ಓರ್ವ ಸುಸಂಸ್ಕೃತ ಮತ್ತು ಸಚ್ಚಾರಿತ್ರ್ಯವಂತ ವ್ಯಕ್ತಿತ್ವದ ಹೆಸರಾಂತ ವೈದ್ಯ ಹಾಗೂ ಸಮಾಜ ಸೇವಕ ಡಾ. ಧನಂಜಯ ಸರ್ಜಿ ಅವರಿಗೆ ಅವಕಾಶ ನೀಡಿದೆ. ಡಾ. ಸರ್ಜಿ ಅವರು ತನ್ನ ಎಮ್.ಡಿ. ಪದವಿಯನ್ನು ಮಣಿಪಾಲದ ಕೆಎಂಸಿಯಲ್ಲಿ ಪೂರೈಸಿದ್ದು ಕರಾವಳಿ ಭಾಗದ ಜನರ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತಿದ್ದಾರೆ. ಉಡುಪಿ ಸಹಿತ ಕರಾವಳಿಯ ಬಿಜೆಪಿ ಕಾರ್ಯಕರ್ತರು ಪಕ್ಷ ನಿಷ್ಠರಾಗಿದ್ದು ಪಕ್ಷದ ಬದ್ಧತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಲಾರರು. ಪ್ರಜ್ಞಾವಂತ, ಪ್ರಬುದ್ಧ ಪದವೀಧರ ಮತ್ತು ಶಿಕ್ಷಕ ಮತದಾರರು ಡಾ. ಧನಂಜಯ ಸರ್ಜಿ ಅವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸುವ ಮೂಲಕ ಮಗದೊಮ್ಮೆ ಮೇಲ್ಮನೆಯಲ್ಲಿ ವೈದ್ಯರೊಬ್ಬರು ಕ್ಷೇತ್ರವನ್ನು ಪ್ರತಿನಿಧಿಸಿ ಡಾ.ವಿ.ಎಸ್. ಆಚಾರ್ಯರವರ ದಾಖಲೆಯ ಅಭಿವೃದ್ಧಿಯ ಶಕೆಯನ್ನು ಮುಂದುವರಿಸಲು ಸದವಕಾಶ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಹಾಲಿ ವಿಧಾನ ಪರಿಷತ್ ಸದಸ್ಯರು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿರುವ ಸಜ್ಜನ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರನ್ನು ಪ್ರಜ್ಞಾವಂತ ಶಿಕ್ಷಕ ಮತದಾರರು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಮಗದೊಮ್ಮೆ ಮೇಲ್ಮನೆಯಲ್ಲಿ ಶಿಕ್ಷಕರ ಧ್ವನಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸಲು ಅವಕಾಶವನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಕಾರ್ಯಕರ್ತ ಆಧಾರಿತ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರುವ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಿ ಬೆಳೆಸುವ ಪಕ್ಷ ಬಿಜೆಪಿ. ಈ ನಿಟ್ಟಿನಲ್ಲಿ
ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಸಿ.ಟಿ. ರವಿ, ಎನ್. ರವಿ ಕುಮಾರ್ ಹಾಗೂ ಎಂ.ಜಿ. ಮುಳೆ ಅವರನ್ನು ಅಭಿನಂದಿಸುವುದಾಗಿ ಯಶ್ಪಾಲ್ ಸುವರ್ಣ ತಿಳಿಸಿದರು.
ಉಡುಪಿ : ಮತ ಎಣಿಕೆಗೆ ನಿಗದಿ ಪಡಿಸಿರುವ ಸೂಚನೆಗಳ ಕ್ರಮ ಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಆಗದಂತೆ ನೋಡಿಕೊಂಡು ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವೀಕ್ಷಕ ಹಿತೇಶ್ ಕೆ.ಕೋಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಪೂರ್ವ ಸಿದ್ಧತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮತ ಎಣಿಕೆ ಜೂ.4ರಂದು ನಗರದ ಸೆಂಟ್ ಸಿಸಿಲಿ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ಮತ ಎಣಿಕೆ ಪ್ರಾರಂಭವಾಗುವ ಮೊದಲು ಮತಯಂತ್ರದ ಎಣಿಕೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಪ್ರತಿ ಮತಯಂತ್ರದ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಬರೆದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೆ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಸಹಾಯಕ ಚುನಾವಣಾ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.