ಮಂಗಳೂರು : ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ ಮಾಡುವ ಹಾಗೂ ಮೀಡಿಯಾ ನಕಲಿ ಸ್ಟಿಕ್ಕರ್ ಅಳವಡಿಸಿಕೊಂಡಿರುವ ವಾಹನಗಳನ್ನು ಪತ್ತೆ ಹಚ್ಚುವಂತೆ ಸಂಚಾರಿ ಪೊಲೀಸರಿಗೆ ಪೊಲೀಸ್ ಕಮಿಷನರ್ ಅನುಪಮ್ ಆಗರ್ವಾಲ್ ಸೂಚಿಸಿದ್ದಾರೆ.
ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ, ಮೀಡಿಯಾ, ಪ್ರೆಸ್ ಸ್ಟಿಕರ್ ದುರ್ಬಳಕೆಗೆ ಕಡಿವಾಣ ಹಾಕುವಂತೆ ಹಾಗು ಕರ್ತವ್ಯ ನಿರ್ವಹಿಸುವ ಸಂದರ್ಭ ಪತ್ರಕರ್ತರಿಗೆ ಭದ್ರತೆ ಖಾತ್ರಿ ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಐಡಿ ಕಾರ್ಡ್ ದುರ್ಬಳಕೆ ಪ್ರಕರಣಗಳು ಕಂಡು ಬರುತ್ತಿವೆ. ಗುರುವಾರ ರಾತ್ರಿ ಕೊಡಿಯಾಲ್ ಬೈಲ್ ಬಳಿ ನಡೆದ ಸರಣಿ ಅಪಘಾತದಲ್ಲಿ ಕಾರು ಒಂದರಲ್ಲಿ ಮಾಧ್ಯಮ ಹೆಸರು ದುರ್ಬಳಕೆ ಮಾಡಿ ಸ್ಥಳದಲ್ಲಿ ನಕಲಿ ಐಡಿ ಕಾರ್ಡ್ ಪತ್ತೆಯಾಗಿದೆ. ಮಾಧ್ಯಮ ಕಾರ್ಡ್ಗಳ ದುರ್ಬಳಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಹಲವಾರು ವಾಹನಗಳಲ್ಲಿ ಮೀಡಿಯಾ ಹಾಗೂ ಪ್ರೆಸ್ ಸ್ಟಿಕರ್ ಬಳಕೆ ಕಂಡು ಬರುತ್ತಿದೆ. ಇಂತಹ ಮಾಧ್ಯಮ ಸ್ಟಿಕರ್ ಬಳಕೆ ಮಾಡಿ ಕಾನೂನು ಬಾಹಿರ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಇಂತಹ ವಾಹನಗಳ ತಪಾಸಣೆ ನಡೆಸಬೇಕು. ಪತ್ರಕರ್ತರು ನಿರ್ಭೀತಿಯಿಂದ, ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ಭದ್ರತೆ ಖಾತ್ರಿಪಡಿಸಬೇಕು ಎಂದು ಸಂಘ ಮನವಿ ಮಾಡಿತ್ತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರೀಫ್ ಪಡುಬಿದ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಖಪಾಲ್ ಪೊಳಲಿ, ರಾಜೇಶ್ ದಡ್ಡಂಗಡಿ, ಸದಸ್ಯರಾದ ಪ್ರಸನ್ನ ಪೂಜಾರಿ, ಶಶಿಕಾಂತ್ ಜೆ., ಸಂದೀಪ್ ಕುಮಾರ್ ಉಪಸ್ಥಿತರಿದ್ದರು.