ಮಂಗಳೂರು : ಮಂಗಳೂರಿನಿಂದ ಮೂಲ್ಕಿ ಕಾರ್ನಾಡು ಕಡೆಗೆ ಬರುತ್ತಿದ್ದ ರಿಕ್ಷಾ ಒಂದಕ್ಕೆ ಕಾರೊಂದು ಹಿಂಬದಿಯಿಂದ ಢಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಚಾಲಕ ಸೇರಿ ನಾಲ್ವರು ಗಾಯಗೊಂಡ ಘಟನೆ ಮೂಲ್ಕಿಯ ಕೊಲ್ನಾಡು ಹೆದ್ದಾರಿಯಲ್ಲಿ ನಡೆದಿದೆ.
ಗಾಯಗೊಂಡವರನ್ನು ರಿಕ್ಷಾ ಚಾಲಕ ಅಬ್ದುಲ್ ಬಶೀರ್ (35), ಪ್ರಯಾಣಿಕರಾದ ಮರಕಡದ ಶೋಭಾ (55), ಕುಂಜತ್ತಬೈಲ್ನ ಭವಾನಿ (65) ಮತ್ತು ಪಣಂಬೂರಿನ ವಸಂತಿ (72) ಎಂದು ಗುರುತಿಸಲಾಗಿದೆ.
ಕಾರು ಹತೋಟಿ ಕಳೆದುಕೊಂಡು ನಿಧಾನವಾಗಿ ಮೂಲ್ಕಿಯತ್ತ ಹೋಗುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ರಿಕ್ಷಾ ಚಾಲಕ ಒಂದಷ್ಟು ದೂರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿದ್ದ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯಲ್ಲಿ ಎರಡೂ ವಾಹನ ಜಖಂ ಆಗಿದ್ದು, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.