Thursday, March 6, 2025
Banner
Banner
Banner
Home » ಶೀರೂರು ಮಠದ ಪರ್ಯಾಯ : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ

ಶೀರೂರು ಮಠದ ಪರ್ಯಾಯ : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ

by NewsDesk

ಉಡುಪಿ : ಭಾವಿ ಪರ್ಯಾಯ ಶೀರೂರು ಪರ್ಯಾಯ 2026-28ರ ಅಂಗವಾಗಿ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರು ನಡೆಸಲಿರುವ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ಅಕ್ಕಿ ಮುಹೂರ್ತ ಗುರುವಾರ ಉಡುಪಿ ಶೀರೂರು ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಬೆಳಗ್ಗೆ 9ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, ಬಳಿಕ ಚಿನ್ನದ ಪಲ್ಲಕ್ಕಿ ಹಾಗೂ ಅಕ್ಕಿಮುಡಿಯನ್ನು ನೂರಾರು ಮಂದಿ ಭಕ್ತಾದಿಗಳು ಅಕ್ಕಿಮುಡಿಯನ್ನು ತಲೆಯ ಮೇಲೆ ಹೊತ್ತು ರಥಬೀದಿಯಲ್ಲಿ ಶ್ರೀಮುಡಿ ಮೆರವಣಿಗೆ ನಡೆಸಿ ಶ್ರೀಮಠಕ್ಕೆ ತರಲಾಯಿತು. ಆ ಬಳಿಕ ತಂಡುಲ ಸಂಗ್ರಹ, ವಿವಿಧ ಸಂಘ- ಸಂಸ್ಥೆಗಳಿಂದ ಅಕ್ಕಿ ಸಂಗ್ರಹ ಸಂಕಲ್ಪ ಮಾಡಲಾಯಿತು.

ಚೆಂಡೆ, ವಾದ್ಯ ಸಹಿತ ಮಂತ್ರಘೋಷಗಳು ಮೊಳಗಿದವು. ಶೀರೂರು ಮಠದ ಪಟ್ಟದ ದೇವರಾದ ಶ್ರೀವಿಠಲ ದೇವರ ಮುಂಭಾಗ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಸ್ವರ್ಣ ಪಲ್ಲಕ್ಕಿಯಲ್ಲಿ ಶ್ರೀಮುಡಿಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಈಶಪ್ರಿಯತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ವಿಶ್ವವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮುಷ್ಠಿ ಕಾಣಿಕೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳ್ತಾಯ, ಶಾಸಕ ಯಶ್‌ಪಾಲ್ ಸುವರ್ಣ, ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಉದಯಕುಮಾರ್ ಶೆಟ್ಟಿ ಮುನಿಯಾಲು, ಇಂದ್ರಾಳಿ ಜಯಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb