ಮಂಗಳೂರು : ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೇರಿ ದುಂಡಾವರ್ತನೆ ತೋರಿದ್ದ 18 ಶಾಸಕರನ್ನು 6 ತಿಂಗಳು ಅಮಾನತುಗೊಳಿಸಿರುವುದನ್ನು ಶಾಸಕರು ಶಿಕ್ಷೆ ಎಂದು ಭಾವಿಸುವುದು ಬೇಡ. ಅವತ್ತು ನಡೆದ ಘಟನೆ ರಾಜ್ಯದ ಜನತೆಗೆ ಅಸಹ್ಯ ಮೂಡಿಸಿದೆ. ಶಾಸಕರು ತಮ್ಮ ವರ್ತನೆಯನ್ನು ತಿದ್ದಿ ಕೆಲಸ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮತ್ತೆ ಇಂತಹ ವರ್ತನೆ ಮುಂದುವರಿಸಿದರೆ ಒಂದು ವರ್ಷ ಅಮಾನತು ಅಥವಾ ಕಾಯ್ದೆಯಡಿ ಲಭ್ಯವಿರುವ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಕೊನೆಯ ದಿನದಂದು ಧನ ವಿನಿಯೋಗದ ಬಿಲ್ ಮಂಜೂರು ಮಾಡುವ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುವ ರೀತಿಯಲ್ಲಿ ಕೆಲ ಶಾಸಕರು ವರ್ತಿಸಿದ್ದರು. ಸಂವಿಧಾನ ಪೀಠದ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರು ತಿಂಗಳು ಅಮಾನತು ಮಾಡಲಾಗಿದೆ ಎಂದವರು ಹೇಳಿದರು.