ಕುಂದಾಪುರ : ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ತಂದೆ, ಮಗ ಸಾವನ್ನಪ್ಪಿ ತಾಯಿಯನ್ನು ರಕ್ಷಿಸಿದ ಘಟನೆ ಮೇ. 15 ರಂದು ಗುರುವಾರ ಬೆಳಿಗ್ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಸಂಭವಿಸಿದೆ.
ಮೃತರನ್ನು ಮಾಧವ ದೇವಾಡಿಗ (55), ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ತಾಯಿ ತಾರಾ ದೇವಾಡಿಗ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೂಲತಃ ಕುಂದಾಪುರದವರಾದ ಇವರು ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ಶಂಕರ್ ಶೆಟ್ಟಿ ಅವರ ಕಟ್ಟಡದಲ್ಲಿ ಸುಮಾರು ಏಳು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಂದೆ ಮತ್ತು ಮಗ ಕುಂದಾಪುರ ರಿಲಯನ್ಸ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಕುಂಭಾಸಿ ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಡುಗೆ ಕೆಲಸದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆ ರಂಗೋಲಿ ಹಾಕಲೆಂದು ಮನೆಯಿಂದ ಹೊರಗಡೆ ಬಂದಾಗ ಮನೆಯ ಎದುರುಗಡೆ ಇದ್ದ ಬಾವಿಯಲ್ಲಿ ಕಿರುಚುವ ಶಬ್ದ ಕೇಳಿ ಬಾವಿಯಲ್ಲಿ ಇಣುಕಿ ನೋಡುವಾಗ ಮಹಿಳೆ ಬಾವಿಯಲ್ಲಿ ಒದ್ದಾಡುತ್ತಿರುವುದನ್ನು ಕಂಡು ಅಕ್ಕ ಪಕ್ಕದವರನ್ನು ಕರೆದು ತಕ್ಷಣ ಮಹಿಳೆಯನ್ನು ರಕ್ಷಿಸಲಾಯಿತು. ಅಷ್ಟರಲ್ಲಿ ಪತಿ, ಮತ್ತು ಮಗ ಮೃತಪಟ್ಟಿದ್ದರು.
ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತ ದೇಹಗಳನ್ನು ಬಾವಿಯಿಂದ ಹೊರಗೆ ತೆಗೆದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೋಟ ಠಾಣೆ ಪಿಎಸ್ಐ ರಾಘವೇಂದ್ರ ಸಿ. ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.