ಆ.15ರಂದು ಮೂರನೇ ಆವೃತ್ತಿಯ “ಕೆನರಾ ಮ್ಯಾರಥಾನ್”

ಉಡುಪಿ : ಕೆನರಾ ಬ್ಯಾಂಕ್ ವತಿಯಿಂದ ‘ಮಹಿಳಾ ಸಬಲೀಕರಣ’ ಎಂಬ ಧ್ಯೇಯವಾಕ್ಯದೊಂದಿಗೆ ಇದೇ ಆಗಸ್ಟ್ 15ರಂದು ಮೂರನೇ ಆವೃತ್ತಿಯ “ಕೆನರಾ ಮ್ಯಾರಥಾನ್” ಸ್ಪರ್ಧಾಕೂಟವನ್ನು ಆಯೋಜಿಸಲಾಗಿದೆ ಎಂದು ಮ್ಯಾರಥಾನ್ ಆಯೋಜನಾ ಸಮಿತಿಯ ಸಚಿನ್ ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 21 ಕಿ.ಮೀ, 10 ಕಿ.ಮೀ, 5 ಕಿ.ಮೀ ಹಾಗೂ 3 ಕಿ.ಮೀ. ಈ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಅಂದು ಬೆಳಿಗ್ಗೆ 5.30ರಿಂದ ಕೆನರಾ ಬ್ಯಾಂಕ್‌ನ ಮಣಿಪಾಲ ಸರ್ಕಲ್ ಕಚೇರಿಯಿಂದ ಓಟದ ಸ್ಪರ್ಧೆ ಆರಂಭಗೊಳ್ಳಲಿದೆ ಎಂದರು.

ಮಣಿಪಾಲ ಸರ್ಕಲ್ ಕಚೇರಿಯಿಂದ ಆರಂಭಗೊಳ್ಳುವ 21 ಕಿ.ಮೀ. ಮ್ಯಾರಥಾನ್ ಓಟವು, ಆರ್‌ಎಸ್‌ಬಿ ಸಭಾಭವನ, ವೇಣುಗೋಪಾಲ್ ಟೆಂಪಲ್ ಮಾರ್ಗವಾಗಿ ಶಾಂತಿನಗರ, ಟ್ಯಾಪ್ಮಿ ಮೂಲಕ ಸಾಗಿ ಕಬ್ಯಾಡಿಯಲ್ಲಿ ಕೊನೆಗೊಳ್ಳಲಿದೆ. ಹಾಗೆಯೇ 3, 5 ಹಾಗೂ 10 ಕಿ.ಮೀ ಓಟವು ಈ ಮಾರ್ಗದಲ್ಲೇ ಸಾಗಲಿದೆ ಎಂದು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ವಿಭಾಗದಲ್ಲೂ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿವಿಧ ವಿಭಾಗಗಳು ಸಹಿತ ಒಟ್ಟು ಐದು ಲಕ್ಷ ಮೊತ್ತದ ಬಹುಮಾನವನ್ನು ನೀಡಲಾಗುವುದು. ಐದು ಸಾವಿರ ಮಂದಿ ಸ್ಪರ್ಧಿಗಳು‌ ಭಾಗವಹಿಸುವ ನಿರೀಕ್ಷೆ ಇದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಅನ್‌ಲೈನ್ ಹಾಗೂ ಕೆನರಾ ಬ್ಯಾಂಕಿನ ಯಾವುದೇ ಶಾಖೆಯಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ದುರ್ಗಾ ಪ್ರಸಾದ್, ಸೂರಜ್ ಉಪ್ಪೂರು, ನರಸಿಂಹಮೂರ್ತಿ, ವಿಶಾಲ್ ಸಿಂಗ್ ಇದ್ದರು.

Related posts

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar

ಕರವೇ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ