ಶಿರ್ವ : ಶಿರ್ವ ಠಾಣೆ ವ್ಯಾಪ್ತಿಯ ಪಿಲಾರು ಖಾನದಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ನ್ನು ವಶಕ್ಕೆ ಪಡೆದ ಶಿರ್ವ ಪೊಲೀಸರು ಟಿಪ್ಪರ್ ಚಾಲಕ ಮತ್ತು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಿರ್ವ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಕ್ತಿವೇಲು ಇ. ಅವರು ಸಿಬ್ಬಂದಿಯೊಂದಿಗೆ ಪೆರ್ನಾಲ್ ಯೂನಿಯನ್ ಬ್ಯಾಂಕ್ ಬಳಿ ಬರುತ್ತಿದ್ದ ಮರಳು ತುಂಬಿದ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ಚಾಲಕನನ್ನು ವಿಚಾರಿಸಿದಾಗ ಗಣಿ ಇಲಾಖೆಯಿಂದ ಪರವಾನಗಿ ಪಡೆಯದೆ ಬಜಪೆಯ ನದಿಯಿಂದ ಮರಳನ್ನು ಕಳವು ಮಾಡಿ ಹಿರಿಯಡ್ಕಕ್ಕೆ ಸಾಗಿಸುತ್ತಿರುವುದಾಗಿ ತಿಳಿಸಿದ್ದ.
ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ 14 ಸಾವಿರ ರೂ. ಮೌಲ್ಯದ 3 ಯೂನಿಟ್ ಮರಳು ಪತ್ತೆಯಾಗಿದೆ. ಮರಳು ಸಹಿತ ಟಿಪ್ಪರ್ ವಶಪಡಿಸಿಕೊಂಡ ಪೊಲೀಸರು ಆರೋಪಿಗಳಾದ ಟಿಪ್ಪರ್ ಚಾಲಕ ಬಿ.ಗಿರೀಶ್ ಕುಮಾರ್, ಟಿಪ್ಪರ್ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.