ಅಂಕೋಲಾ ಗುಡ್ಡಕುಸಿತದಲ್ಲಿ ಕಣ್ಮರೆಯಾದ ಕೇರಳದ ವ್ಯಕ್ತಿ ಅರ್ಜುನ್‌ ಹುಡುಕಾಟಕ್ಕಾಗಿ ಸುಪ್ರೀಂ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಅಂಕೋಲಾ : 10 ಜನರನ್ನು ಬಲಿ ಪಡೆದ ಉತ್ತರ ಕನ್ನಡದ ಅಂಕೋಲಾದಲ್ಲಿ ಪರಿಹಾರ ಕಾರ್ಯ 6‌ನೇ ದಿನವೂ ಮುಂದುವರೆದಿದೆ. ದುರ್ಘಟನೆಯಲ್ಲಿ ಅನೇಕರು ಇನ್ನು ಕೂಡ ಪತ್ತೆಯಾಗದ ಕಾರಣ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಈ ಮಧ್ಯೆ ದುರ್ಘಟನೆಯ ಬಳಿಕ ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನನ ಹುಡುಕಾಟ ತೀವ್ರಗೊಳಿಸಲು ಕೇಂದ್ರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಲಾಗಿದೆ.

ಕೇರಳ‌ ಮೂಲದ ವಕೀಲ ಕೆ. ಆರ್. ಸುಭಾಷ್ ಚಂದ್ರನ್ ಪಿಐಎಲ್ ಸಲ್ಲಿಸಿದ್ದು, ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮುಂದೆ ಅರ್ಜಿ ಮಂಡಿಸಲು ಸುಪ್ರೀಂಕೋರ್ಟ್ ರಿಜಿಸ್ಟ್ರಿ ಅನುಮತಿಯನ್ನು ನೀಡಿದೆ. ಕೇರಳ ಮೂಲದ ಅರ್ಜುನ ಜುಲೈ 22ರಂದು ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು.

ಅರ್ಜುನ (34), ಕೃಷ್ಣಪ್ರಿಯಾ (24) ಪ್ರೀತಿಸಿ ವಿವಾಹವಾಗಿದ್ದರು. ಅರ್ಜುನ ಪತ್ನಿ ಕೃಷ್ಣಪ್ರಿಯಾ 6 ತಿಂಗಳ ಮಗುವಿನ ಜೊತೆ ಪತಿಯ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ಜೋಯಿಡಾದಿಂದ ಕೇರಳಕ್ಕೆ ಹೊರಟಿದ್ದ ಅರ್ಜುನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾದ ಬಳಿಕ ನಾಪತ್ತೆಯಾಗಿದ್ದಾರೆ. ಚೆನ್ನಾಗಿ ದುಡಿದು ಸಹೋದರಿ ವಿವಾಹ ಮಾಡಬೇಕು, ಹೊಸದಾದ ಮನೆ ಕಟ್ಟಿ ಆನಂದದಿಂದ ಜೀವನ ಸಾಗಿಸಬೇಕು ಎಂದು ಕನಸು ಕಂಡಿದ್ದ ಅರ್ಜುನ ಪರಿಸ್ಥಿತಿ ಹೇಗಿದೆ? ಎಂಬ ಮಾಹಿತಿ ಸದ್ಯಕ್ಕೆ ಇಲ್ಲ.

ಅರ್ಜುನ ಚಾಲನೆ ಮಾಡುತ್ತಿದ್ದ ಲಾರಿಯ ಮೇಲೆ ಸುಮಾರು 60 ಟನ್ ಮಣ್ಣು ಬಿದ್ದಿದೆ. ಆದರೆ ಅವರ ಮೊಬೈಲ್ ರಿಂಗ್ ಆಗುತ್ತಿದೆ. ಬೇಗ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಸಿದರೆ ಅರ್ಜುನ ಬದುಕುತ್ತಾರೆ ಎಂದು ಅವರ ಕುಟುಂಬದವರು ಒತ್ತಾಯಿಸಿದ್ದಾರೆ.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours