ಉಡುಪಿ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದೂಳಿದ ವರ್ಗಗಳ ಸಣ್ಣಸಮುದಾಯಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ದೇಶದಲ್ಲಿ ಜನಗಣಿತಿ ಜಾತಿ ಗಣತಿಗೆ ಕೇಂದ್ರ ಸರಕಾರ ಆದೇಶ ನೀಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಾಧ್ಯಮದ ಜತೆ ಮಾತನಾಡಿದ ಅವರು, ಸಣ್ಣ ಸಮುದಾಯಗಳಿಗೆ ಹೊಸ ಜಾತಿ ಗಣತಿ ಹೊಸ ಶಕ್ತಿ ನೀಡಲಿದೆ. ಗಣತಿಯ ಮೂಲಕ ನಿಖರವಾದ ಅಂಕಿ ಸಂಖ್ಯೆ ಮತ್ತು ವಿವರ ಕೇಂದ್ರ ಸರಕಾರಕ್ಕೆ ಸಿಗಲಿದೆ. ಶಕ್ತಿ ಇಲ್ಲದ ಸಣ್ಣ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರೆಯಲಿದೆ. ಸಮಬಾಳು, ಸಮಪಾಲಿಗೂ ಅವಕಾಶವಾಗಲಿದೆ ಎಂದರು.
ರಾಜ್ಯದ ಗಣತಿಯಲ್ಲಿ ಜಾತಿ ಯಾವುದು ಎಂಬ ಒಂದು ಪ್ರಶ್ನೆ ಮಾತ್ರ ಇತ್ತು. ಹತ್ತು ವರ್ಷದಿಂದ ಗಣತಿ ನಡೆದದ್ದು ಬಿಟ್ಟರೆ ಇನ್ನೂ ಬಹಿರಂಗಪಡಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಗಂಡಾಂತರ ಬಂದಾಗ ಗಣತಿಯ ವಿವರ ನೀಡುತ್ತೇವೆ ಎನ್ನುತ್ತಾರೆ. ಈಗ ಕೇಂದ್ರ ಸರಕಾರದ ನಿಲುವನ್ನು ಸ್ವಾಗತಿಸುವುದು ಅವರಿಗೆ ಅನಿವಾರ್ಯವಾಗಿದ್ದು, ತಮ್ಮ ವರದಿಯ ಮಾಹಿತಿಯನ್ನು ಈಗ ಬಿಡುತ್ತೇವೆ, ಮತ್ತೆ ಬಿಡುತ್ತೇವೆ ಎಂದು ಹೆದರಿಸುವ ಪರಿಪಾಠ ಇನ್ನು ನಡೆಯದು ಎಂದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಈ ಸಂಬಂಧ ಕೇಂದ್ರ ಸರಕಾರವನ್ನು ಆಗ್ರಹ ಮಾಡಿದ್ದು ಸತ್ಯ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಏನೂ ಮಾಡಿಲ್ಲ ಎಂಬ ಕಾರಣಕ್ಕೆ ಕೇಂದ್ರವನ್ನು ಒತ್ತಾಯಿಸುತ್ತಿದ್ದರು ಎಂದರು.
ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಆಗಲಿದೆ. ಭಾರತದಲ್ಲಿದ್ದು ಪಾಕಿಸ್ಥಾನಕ್ಕೆ ಜೈ ಎನ್ನುವುದು ನಿಲ್ಲಬೇಕು ಎಂದರು.