ಹಿಂದೂಗಳನ್ನೇ ಗೊಂದಲಕ್ಕೀಡು ಮಾಡಿದ ಶಾಸಕ ಹರೀಶ್ ಪೂಂಜ – ತಿರುಗುಬಾಣವಾಯ್ತು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ಪ್ರಕರಣ

ಮಂಗಳೂರು : ರಾಜಕೀಯ ಬೇಳೆ ಬೇಯಿಸಲು ತಂತ್ರ ಹೆಣೆಯಲು ಹೋಗಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರೇ ಇದೀಗ ಪೇಚಿಗೆ ಸಿಲುಕುವಂತಾಗಿದೆ.

ಸರ್ಕಾರಿ ಶಾಲೆ ಮತ್ತು ಕ್ಯಾಂಪಸ್‌ಗಳಲ್ಲಿ ಧಾರ್ಮಿಕ ಆಚರಣೆ ಮಾಡದಂತೆ ಕಾಂಗ್ರೆಸ್ ಸರಕಾರ ಸುತ್ತೋಲೆ ಹೊರಡಿಸಿದೆ ಎಂದು ಶಾಸಕ ಹರೀಶ್ ಪೂಂಜಾ ಆರೋಪಿಸಿದ್ದರು. ಆದರೆ ಈ ಆದೇಶ ಹೊರಡಿಸಿದ್ದೇ ಬಿಜೆಪಿ ಸರ್ಕಾರ. ಆಗಿನ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ 2013ರ ಫೆ.7ರಂದು ಈ ಆದೇಶ ಹೊರಡಿಸಿತ್ತು. ಇದೇ ಆದೇಶದ ಅನ್ವಯ ಇತ್ತೀಚೆಗೆ ಎಲ್ಲಾ ಶಾಲಾ – ಕಾಲೇಜುಗಳಿಗೆ ದ.ಕ. ಡಿಡಿಪಿಐ ಸುತ್ತೋಲೆ ಹೊರಡಿಸಿತ್ತು.

ಇದೇ ಸುತ್ತೋಲೆಯನ್ನು ಹಿಡಿದುಕೊಂಡು ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಹರೀಶ್ ಪೂಂಜಾ ಬಿಂಬಿಸಲೆತ್ನಿಸಿದ್ದರು. ಹರೀಶ್ ಪೂಂಜಾ ಹೇಳಿಕೆಯಂತೆ ಇಡೀ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಭಜನೆ ಮಾಡಿ ಪ್ರತಿಭಟನೆ ನಡೆಸಿತ್ತು. ಇದೀಗ ಈ ಆದೇಶ ಬಿಜೆಪಿ ಸರ್ಕಾರದ್ದೇ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇದೀಗ ಹರೀಶ್ ಪೂಂಜಾ ಎಬ್ಬಿಸಿದ ವಿವಾದದಿಂದ ಬಿಜೆಪಿ ಕಾರ್ಯಕರ್ತರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಈ ಹಿಂದೆ ಒಮ್ಮೆ ತನ್ನ ಮೇಲೆ ತಲವಾರು ದಾಳಿಗೆ ಯತ್ನಿಸಲಾಗಿದೆ ಎಂದು ಹರೀಶ್ ಪೂಂಜಾ ಗುಲ್ಲೆಬ್ಬಿಸಿದ್ದರು. ಕೊನೆಗೆ ತಲವಾರು ದಾಳಿ ನಡೆದೇ ಇಲ್ಲ ಎಂಬುದು ಪೊಲೀಸ್ ತನಿಖೆಯಲ್ಲಿ ದೃಢಗೊಂಡಿತ್ತು. ಇದೀಗ ಅದೇ ಮಾದರಿಯಲ್ಲಿ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಲು ಹೋಗಿ ಬಿಜೆಪಿಗೆ ತಿರುಗುಬಾಣವಾಗಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ