ಕಟ್ಟಡ ಪರವಾನಿಗೆ ನೀಡಲು ಸತಾಯಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ವ್ಯಕ್ತಿಯ ‘ಏಕಾಂಗಿ ಧರಣಿ’

ಉಡುಪಿ : ಹಲವು ಬಾರಿ ಕಚೇರಿಗೆ ಅಲೆದಾಟ ಮಾಡಿದರೂ ಕಟ್ಟಡ ಪರವಾನಿಗೆ ನೀಡುತ್ತಿಲ್ಲ ಎಂದು ಆರೋಪಿಸಿ ಅರ್ಜಿದಾರ, ಸಾಮಾಜಿಕ ಕಾರ್ಯಕರ್ತರೊಬ್ಬರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯೊಳಗೆ ಧರಣಿ ಕುಳಿತ ಘಟನೆ ನಡೆದಿದೆ.

ಕಚೇರಿಯೊಳಗೆ ಕುಳಿತು ಧರಣಿ ನಡೆಸಿದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಹನೀಫ್, ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಅವರ ಭರವಸೆ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಟ್ಟಿದ್ದಾರೆ.

ಪ್ರಾಧಿಕಾರವೇ ನೀಡಿದ ಲೇಔಟ್‌ನ್ನು ಅಧಿಕಾರಿಗಳು ಅಕ್ರಮ ಎಂದು ಹೇಳಿ ಕಟ್ಟಡ ಪರವಾನಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಜಾಗಕ್ಕೆ ಭೂಬೆಲೆಯ ಶೇ.15ರಷ್ಟು ದಂಡ ಪಾವತಿಸಲಾಗಿದೆ. ಹಾಗಾಗಿ ಈ ಲೇಔಟ್ ಅಕ್ರಮ ಆಗಲು ಹೇಗೆ ಸಾಧ್ಯ? ಎಂದು ಮುಹಮ್ಮದ್ ಹನೀಫ್ ಪ್ರಶ್ನಿಸಿದ್ದಾರೆ.

ಬಡವರಿಗೆ ನೀಡಿದ ಮೂರೂವರೆ ಸೆಂಟ್ಸ್ ಜಾಗಕ್ಕೆ ತೊಂದರೆ ಕೊಡುತ್ತಿದ್ದಾರೆ. ಇವರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಇಂತಹ ಪ್ರಾಧಿಕಾರ ನಮಗೆ ಬೇಡ. ಪರವಾನಿಗೆ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದರು. ಪ್ರಾಧಿಕಾರದ ಅಧ್ಯಕ್ಷರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹನೀಫ್ ಧರಣಿ ಕೈಬಿಟ್ಟಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ