ಮಾಹೆ ಮತ್ತು ಫಿಟ್‌ವಿಬ್‌ ಸಹಭಾಗಿತ್ವದಲ್ಲಿ ಮಲ್ಪೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ವಿದ್ಯಾರ್ಥಿ ವ್ಯವಹಾರಗಳ ವಿಭಾಗ [ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೂಡೆಂಟ್‌ ಅಫೇರ್ಸ್‌] ಮತ್ತು ಕೆಎಂಸಿಯ ಫಿಟ್‌ನೆಸ್‌ ಕ್ಲಬ್‌ [ಫಿಟ್‌ವಿಬ್‌] ಜಂಟಿಯಾಗಿ ಮಲ್ಪೆಯ ಕದಿಕೆ ಬಳಿಯ ಸಮುದ್ರಕಿನಾರೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿತು. ಮಾದಕವ್ಯಸನದ ವಿರುದ್ಧ ಮಾನಸಿಕ ಜಾಗೃತಿಯನ್ನು ಮೂಡಿಸುವ ಕುರಿತು ಆಶಯವನ್ನು ಕೂಡ ಈ ಕಾರ್ಯಕ್ರಮವು ಹೊಂದಿತ್ತು.

ಮಾಹೆಯ ಯೋಜನೆ ಮತ್ತು ನಿಯಂತ್ರಣ ವಿಭಾಗದ ನಿರ್ದೇಶಕ [ಡೈರೆಕ್ಟರ್‌ ಆಫ್‌ ಪ್ಲ್ಯಾನಿಂಗ್‌ ಆ್ಯಂಡ್‌ ಮಾನಿಟರಿಂಗ್‌] ಡಾ. ರವಿರಾಜ್‌ ಎನ್‌. ಎಸ್‌. ಅವರು ಮುಖ್ಯ ಅತಿಥಿಗಳಾಗಿದ್ದು, ‘ಪ್ರತಿಯೊಬ್ಬನ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸಕ್ಕೆ ವಿಶೇಷ ಮಹತ್ತ್ವವಿದೆ. ಬೋಧಕರು ಮತ್ತು ವಿದ್ಯಾರ್ಥಿಗಳು ಏಕಾಗ್ರತೆಯನ್ನು ಸಾಧಿಸುವಲ್ಲಿಯೂ ಇದು ಪ್ರಯೋಜನಕಾರಿ. ಯೋಗ ಕೇವಲ ಶಾರೀರಿಕ ಚಕುವಟಿಕೆಯಾಗದೆ, ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲಕ್ಕೆ ಕಾರಣವಾಗುತ್ತದೆ. ಶೈಕ್ಷಣಿಕ ವಾತಾವರಣವು ಸ್ಪರ್ಧಾತ್ಮಕವಾಗಿ ಬೆಳೆಯತ್ತಿರುವ ಈ ಸಂದರ್ಭದಲ್ಲಿ ಯೋಚನಾ ಸ್ಪಷ್ಟತೆ, ಭಾವನಾತ್ಮಕ ದೃಢತೆ, ಶಾರೀರಕ ಉಲ್ಲಾಸಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯೋಗಾಭ್ಯಾಸವು ಸಹಕಾರಿಯಾಗಲಿದೆ’ ಎಂದರು.

ಮಾಹೆಯ ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕ [ಡೈರೆಕ್ಟರ್‌ ಆಫ್‌ ಸ್ಟೂಡೆಂಟ್‌ ಅಫೇರ್ಸ್‌] ರಾದ ಡಾ. ಗೀತಾ ಮಯ್ಯ ಅವರು ಮಾತನಾಡಿ, ‘ಯೋಗವು ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಬೆಳೆದು ಬಂದಿದೆ. ವ್ಯಕ್ತಿಯೊಬ್ಬನ ಸಮಗ್ರ ಬೆಳವಣಿಗೆಗೆ ಯೋಗಾಭ್ಯಾಸವು ತುಂಬ ಉಪಯಕ್ತವೆನಿಸುತ್ತದೆ. ಸಮುದ್ರಕಿನಾರೆಯಂಥ ನಿಸರ್ಗ ಸುಂದರ ವಾತಾವರಣದಲ್ಲಿ ಯೋಗಾಭ್ಯಾಸ ಮಾಡುವುದೇ ಒಂದು ವಿಶಿಷ್ಟ ಅನುಭವವಾಗಿದೆ’ ಎಂದರು.

ಮಾಹೆಯ ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಅನ್ನಪೂರ್ಣಾ ಅವರು ಮಾತನಾಡಿ, ‘ಯೋಗಕ್ಕೆ ವಿಶೇಷ ಅರ್ಥವಿದೆ. ಅದು ಆತ್ಮದ ಯಾನ, ಅಂದರೆ ಆತ್ಮವು ಆತ್ಮದ ಮೂಲಕ ಆತ್ಮದತ್ತ ಪಯಣಿಸುವುದು! ಯೋಗಾಭ್ಯಾಸವು ನಮ್ಮ ಪರಂಪರೆಯಿಂದ ಬಂದ ಬಳುವಳಿಯಾಗಿದ್ದು ಇದು ನಮ್ಮ ಹಿರಿಯರ ಸಮರಸವಾದ ಮತ್ತು ಸ್ವಾಸ್ಥ್ಯಪೂರ್ಣವಾದ ಬದುಕಿನ ದ್ಯೋತಕವಾಗಿದೆ. ಪ್ರಸ್ತುತ ಯೋಗದಿನಾಚರಣೆಯು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಲು ಪ್ರೇರೇಪಿಸುವ ಸಂದರ್ಭವಾಗಿದೆ’ ಎಂದರು.

ಫಿಟ್‌ವಿಬ್‌ನ ಅಧ್ಯಕ್ಷರಾದ ಅರ್ಜುನ್‌ ಆಹುಜಾ ಅವರು ಕಾರ್ಯಕ್ರಮ ಸಂಯೋಜಿಸಿದರು. ಮುಖ್ಯ ಯೋಗ ಕಲಾಪದ ಪೂರ್ವದಲ್ಲಿ ಫಿಟ್‌ವಿಬ್‌ನ ಸದಸ್ಯರು ಹದಿನೆದು ನಿಮಿಷಗಳ ಕಾಲ ಝುಂಬಾ ಮತ್ತು ಏರೋಬಿಕ್‌ ಕಲಾಪಗಳನ್ನು ನಡೆಸಿಕೊಟ್ಟರು. ಡಾ. ಅನ್ನಪೂರ್ಣಾ ಯೋಗಾಸನಗಳ ಮಹತ್ತ್ವವನ್ನು ವಿವರಿಸಿದರು. ಆರಂಭದಲ್ಲಿ ಚತ್ರಿಕ್‌ ಮಿತ್ತಲ್‌ ಪ್ರಾರ್ಥನಾಗೀತೆಯನ್ನು ಹಾಡಿದರು. ವಿದ್ಯಾರ್ಥಿ ವ್ಯವಹಾರ [ಸ್ಟೂಡೆಂಟ್‌ ಅಫೇರ್ಸ್‌] ವಿಭಾಗದ ಉಪನಿರ್ದೇಶಕರಾದ ಅರವಿಂದ ಪಾಂಡೆ ಧನ್ಯವಾದ ಸಮರ್ಪಿಸಿದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar