ಮಾಜಿ ಸಚಿವ ನಾಗೇಂದ್ರರಿಂದ ಸಿಎಂಗೆ ಸನ್ಮಾನ – ಸಿದ್ದು ಕಾಲೆಳೆದ ಸುನಿಲ್ ಕುಮಾರ್

ಉಡುಪಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿಗೆ ಜಾಮೀನು ಸಿಕ್ಕಿದೆ. ಬಳಿಕ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಸಿಎಂ‌ಗೆ ಶಾಲು ಹೊದೆಸಿದ್ದರು. ಈ ಕುರಿತು ಮಾಜಿ ಸಚಿವ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿಎಂ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ!

ಸಿಎಂ ಸಿದ್ದರಾಮಯ್ಯನವರೇ, ಶಾಸನಸಭೆಯಲ್ಲಿ ಇಡೀ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ನೀವು ಒಪ್ಪಿಕೊಂಡಿದ್ದು ಸುಳ್ಳೇ? ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದು ಸುಳ್ಳೇ? ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ನಾಗೇಂದ್ರನನ್ನು ಬಂಧಿಸಿದ್ದು ಸುಳ್ಳೇ?

ಎಲ್ಲವೂ ರಾಜ್ಯದ ಜನತೆಯ ಎದುರು ಮುಕ್ತವಾಗಿ ನಡೆದ ಘಟನಾವಳಿಗಳು. ಅಕ್ರಮದ ಸಂಬಂಧ ಜೈಲಿಗೆ ಹೋಗಿ ಬಂದ ಆರೋಪಿಯೊಬ್ಬ ಈಗ ನೇರಾನೇರ ನಿಮ್ಮ ನಿವಾಸಕ್ಕೆ ಬಂದು ವಿಜಯೋತ್ಸವ ನಡೆಸಿ ಬಂದವರಂತೆ ಸನ್ಮಾನ ಮಾಡುತ್ತಾರೆಂದರೆ ಏನರ್ಥ? ಈ ಅಕ್ರಮಕ್ಕೆ ನಿಮ್ಮ ಚಿತಾವಣೆ ಇತ್ತೆ ಹಾಗಾದರೆ? ಆಂಧ್ರದ ಚುನಾವಣೆಗೆ ನಿಮ್ಮ ಬಾಬ್ತಿನಿಂದ ನಾಗೇಂದ್ರ ಎಷ್ಟು ಹಣ ವರ್ಗಾವಣೆ ಮಾಡಿದರು? ಮಹಾರಾಷ್ಟ್ರ ಚುನಾವಣಾ ಹೊತ್ತಿನಲ್ಲಿ ಇನ್ನು ಯಾವ ನಿಗಮಕ್ಕೆ ಕೊಳ್ಳೆ ಹೊಡೆಯೋಣ ಎಂದು ಚರ್ಚಿಸಲು ಆರೋಪಿ ನಾಗೇಂದ್ರನಿಂದ ಅಭಿನಂದನೆ ಹಾಗೂ ಸಲಹೆ ಪಡೆದಿರೇ? ವಾಲ್ಮೀಕಿ ಜನಾಂಗದ ಸಂವಿಧಾನ ಬದ್ಧ ಹಣವನ್ನು ನುಂಗಿ ನೀರು ಕುಡಿದ ಆರೋಪಿಯನ್ನು ವಾಲ್ಮೀಕಿ ಜಯಂತಿಯ ಹಿಂದಿನ ದಿನ ಆಲಂಗಿಸಿ ಅಕ್ಕರೆ ಸುರಿಸಿದ್ದು ಎಷ್ಟು ಸರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನೆ ಮಾಡಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ