ಸಾರ್ವಜನಿಕ ಸ್ಥಳದಲ್ಲಿ ಮೀನಿನ ನೀರು ಡಂಪ್ : ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಚಾಲಕನಿಂದ ದಂಡ ವಸೂಲಿ, ವಾರ್ನಿಂಗ್

ಪಡುಬಿದ್ರಿ : ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮೀನು ಸಾಗಾಟ ಲಾರಿಯೊಂದು ಎರ್ಮಾಳು ಸೇತುವೆಯಲ್ಲಿ ಮೀನಿನ ತ್ಯಾಜ್ಯ ನೀರು ಚೆಲ್ಲುತ್ತಿದ್ದಾಗ ಸಾರ್ವಜನಿಕರ ಸಹಕಾರದಿಂದ ಎರ್ಮಾಳು ತೆಂಕ ಗ್ರಾ.ಪಂ. ಸದಸ್ಯರು ರೆಡ್ ಹ್ಯಾಂಡ್ ಆಗಿ ಹಿಡಿದು ದಂಡ ವಿಧಿಸಿದ್ದಾರೆ.

ಸೇತುವೆಯ ಆಸುಪಾಸಿನಲ್ಲಿ ಗ್ರಾ.ಪಂ. ಸಹಿತ ಗ್ರಾಮಸ್ಥರು ಎಚ್ಚರಿಕೆಯ ನಾಮಫಲಕ ಅಳವಡಿಸಿದ್ದರೂ ಕ್ಯಾರೇ ಅನ್ನದ ಹೆದ್ದಾರಿ ಸಂಚಾರಿಗಳು ಸೇತುವೆಯ ಮೇಲೆ, ಕೆಳಗೆ ಘನ ತ್ಯಾಜ್ಯ ಎಸೆಯುವುದು, ಮೀನು ಸಾಗಾಟ ವಾಹನಗಳು ನೇರವಾಗಿ ಪೈಪ್ ಅಳವಡಿಸಿ ಸೇತುವೆಯ ಕೆಳಭಾಗಕ್ಕೆ ಮೀನಿನ ತ್ಯಾಜ್ಯ ನೀರು ಬಿಡುವುದು ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಗ್ರಾ.ಪಂ.ಬರುತ್ತಿದ್ದು, ಇದರಿಂದಾಗಿ ಸೇತುವೆಯ ಪ್ರದೇಶ ದುರ್ನಾತ ಬೀರುವಂತಾಗಿತ್ತು.

ಇದೀಗ ಕೋಟ ಫಿಶ್‌ಮೀಲ್‌ಗೆ ಮೀನು ಸಾಗಾಟ ನಡೆಸುವ ವಾಹನ ಯಾವುದೇ ಅಂಜಿಕೆ ಇಲ್ಲದಂತೆ ಕಾನೂನು ಬಾಹಿರವಾಗಿ ಸೇತುವೆಯ ಮೇಲೆ ಕೊಳಕು ನೀರು ಚೆಲ್ಲುತ್ತಿತ್ತು. ಹೆದ್ದಾರಿಯಲ್ಲೇ ವಾಹನ ನಿಲ್ಲಿಸಿ ಒಂದು ವಾಹನದಿಂದ ಪೈಪ್ ಮೂಲಕ ನೀರು ಬಿಡುತ್ತಿದ್ದು ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಎರ್ಮಾಳು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ತಪ್ಪಿತಸ್ಥ ವಾಹನ ಚಾಲಕನಲ್ಲಿ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದೆ ಮತ್ತು ಅಪಘಾತ ಹೆಚ್ಚಲೂ ಕಾರಣವಾಗಿದೆ.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar