ಗ್ರಾಮಪಂಚಾಯತ್ ಅಧ್ಯಕ್ಷೆ ವಿರುದ್ದ ಜಾತಿ ನಿಂದನೆ : 8 ಮಂದಿಯ ವಿರುದ್ದ ಪ್ರಕರಣ ದಾಖಲು

ಮಲ್ಪೆ : ತೆಂಕನಿಡಿಯೂರು ಗ್ರಾಮಪಂಚಾಯತ್ ಅಧ್ಯಕ್ಷೆ ವಿರುದ್ದ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 8 ಮಂದಿಯ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಲಿತ ನಿಂದನೆ ಪ್ರಕರಣ ದಾಖಲಾಗಿದೆ.

ಶೋಭಾ ಎಂಬವರು ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದು ಜೂನ್ 28ರಂದು ಪಿಡಿಒ ದಯಾನಂದ ಅವರು ಎಸ್‌ಎಲ್‌ಆರ್‌ಎಮ್ ಘಟಕದಲ್ಲಿ ನೀರಿನ ಹರಿವಿಗೆ ಅಡಚಣೆಯಾಗಿರುವ ಕಾರಣಕ್ಕೆ ಸ್ಥಳಕ್ಕೆ ಬರುವಂತೆ ಹೇಳಿದ ಹಿನ್ನಲೆಯಲ್ಲಿ ಸಂಜೆ 5 ಗಂಟೆಗೆ ತೆಂಕನಿಡಿಯೂರು ಸ್ಮಶಾನದ ಬಳಿ ಇರುವ ಎಸ್‌ಎಲ್‌ಆರ್‌ಎಮ್ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಬಂದ ಸಮಯದಲ್ಲಿ ಆರೋಪಿಗಳಾದ ಶರತ್ ಬೈಲಕೆರೆ, ಕಿರಣ ಪಿಂಟೊ, ವಿಜಯಪ್ರಕಾಶ್, ಗಾಯತ್ರಿ, ಪುಷ್ಪ ಶಾಲಿನಿ, ಕೃಷ್ಣ ಶೆಟ್ಟಿ ಹಾಗೂ ಇತರರು ಸೇರಿ ಏಕವಚನದಲ್ಲಿ ಬೈದಿದ್ದರು. ನೀನು ಕೀಳು ಜಾತಿಯವಳು, ಎಲ್ಲಿಂದಲೋ ಬಂದು ಇಲ್ಲಿ ಅಧ್ಯಕ್ಷಳಾಗಿದ್ದಿ. ಕೀಳು ಜಾತಿಯವಳಾದ ನಿನಗೆ ಏನು ಕೆಲಸ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಬಿಡುವುದಿಲ್ಲ ಎಂದು ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಶೋಭಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರಿಂದ ಉಸಿರಾಟದ ತೊಂದರೆ ಕೂಡ ಆಗಿದೆ. ಶೋಭಾರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಬೇಕೆಂಬ ಉದ್ದೇಶವಿಟ್ಟು‌ಕೊಂಡು ಈ ಕೃತ್ಯ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎಸ್‌ಸಿ & ಎಸ್‌ಟಿ ಕಾಯ್ದೆಯಡಿಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Related posts

ಸಿಪಿಎಂ ಕಾರ್ಯದರ್ಶಿ ಮೇಲೆ ದುರುದ್ದೇಶಪೂರಿತ ಎಫ್ಐಆರ್ – ಖಂಡನೆ

ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ, ಸಿಬಂದಿ ಕನ್ನಡದಲ್ಲೇ ವ್ಯವಹರಿಸುವ ಕಾನೂನು ಅಗತ್ಯ – ಸಚಿವರಿಗೆ ಸಂಸದ ಕೋಟ ಪತ್ರ