ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಅಪಘಾತದಿಂದ ಮೃತ್ಯು

ಮಂಗಳೂರು : ಉದಯೋನ್ಮುಖ ಯಕ್ಷಗಾನ ಕಲಾವಿದ, ಎಂಎಸ್‌ಡಬ್ಲ್ಯು ವಿದ್ಯಾರ್ಥಿ ಪ್ರವಿತ್ ಆಚಾರ್ಯ(21) ಎಂಬವರು ಅರ್ಕುಳದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯರ ಪುತ್ರರಾದ ಪ್ರವಿತ್ ಆಚಾರ್ಯ ಬಂಟ್ವಾಳ ತಾಲೂಕಿನ ವಿಟ್ಲದ ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಎಸ್‌ಡಬ್ಲ್ಯು ವಿದ್ಯಾರ್ಥಿ. ಕಾಲೇಜು ವ್ಯಾಸಂಗದ ಉದ್ದೇಶದಿಂದ ಮಂಗಳೂರು ಸಮೀಪ ತನ್ನ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದರು. ಪ್ರವಿತ್ ಆಚಾರ್ಯ ಪಡೀಲ್ ಅಥವಾ ಬಿ.ಸಿ.ರೋಡ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ವಿಟ್ಲಕ್ಕೆ ಕಾಲೇಜಿಗೆ ಹೋಗುತ್ತಿದ್ದರು.

ಎಂದಿನಂತೆ ಮಂಗಳವಾರ ಪ್ರವಿತ್ ಸಂಜೆ ಕಾಲೇಜು ಮುಗಿಸಿ ಬಿ.ಸಿ‌.ರೋಡ್‌ನಲ್ಲಿದ್ದ ಬೈಕ್ ಹತ್ತಿ ಮಂಗಳೂರಿನತ್ತ ಬರುತ್ತಿದ್ದರು. ಅರ್ಕುಳಕ್ಕೆ ಬರುತ್ತಿದ್ದಂತೆ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಹಿಂಭಾಗದಿಂದ ಬರುತ್ತಿದ್ದ ಐಸ್‌ಕ್ರೀಂ ಸಾಗಾಟದ ವಾಹನ ಪ್ರವಿತ್ ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹವ್ಯಾಸಿ ಯಕ್ಷಗಾನ ಕಲಾವಿದನಾಗಿರುವ ಪ್ರವಿತ್ ಆಚಾರ್ಯ, ಸಸಿಹಿತ್ಲು ಯಕ್ಷಗಾನ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿಯೂ ಯಕ್ಷಗಾನ ಕಲಾಸಕ್ತರ ಗಮನ ಸೆಳೆಯುತ್ತಿದ್ದರು. ಉದಯೋನ್ಮುಖ ಕಲಾವಿದರಾಗಿ ರೂಪುಗೊಳ್ಳುವಾಗಲೇ ಅವರು ಇಹಲೋಕ ತ್ಯಜಿಸಿದ್ದು ಯಕ್ಷಗಾನ ಕಲಾಲೋಕಕ್ಕೆ ಅಪಾರ ನಷ್ಟವಾಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ