ಟ್ರಾನ್ಸ್‌ಫಾರ್ಮರ್‌ನಿಂದ ಹಾರಿದ ಕಿಡಿ – ಮರಗಿಡಗಳು ಹೊತ್ತಿ ಉರಿದು ಅಪಾರ ಹಾನಿ

ಶಿರ್ವ : ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಹಾರಿದ ಕಿಡಿಯಿಂದ ಕಾಡಿಕಂಬಳ ನಜರೆತ್‌ನಗರ-ಹಿಂದೂ ರುದ್ರಭೂಮಿ-ಶಿರ್ವ ಹಿಂದೂ ಪ.ಪೂ. ಕಾಲೇಜಿನ ಬಳಿಯ ಪ್ರದೇಶಕ್ಕೆ ಬೆಂಕಿ ತಗಲಿ ಮರಗಿಡಗಳು ಹೊತ್ತಿ ಉರಿದಿದ್ದು, ಅಪಾರ ಹಾನಿ ಸಂಭವಿಸಿದೆ.

ರಸ್ತೆ ಬದಿಯಲ್ಲಿರುವ ವಿದ್ಯುತ್‌ ಟ್ರಾನ್ಸ್‌‌ಫಾರ್ಮ್‌‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಿಡಿ ಹಾರಿ ಬೆಂಕಿ ಹತ್ತಿಕೊಂಡು ಸುಮಾರು 2-3 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿತು. ಕಡಿದು ಹಾಕಿದ ಮರದ ಗೆಲ್ಲುಗಳು ಮತ್ತು ಒಣಗಿದ ತರಗೆಲೆಗಳು ಇದ್ದ ಪರಿಣಾಮ ಇಡೀ ಪ್ರದೇಶ ಹೊತ್ತಿ ಉರಿದಿದ್ದು, ಪಕ್ಕದಲ್ಲಿದ್ದ ಮನೆಗಳಿಗೆ ಬೆಂಕಿ ಹರಡದಂತೆ ಸ್ಥಳೀಯರು ಸೇರಿ ಪ್ರಯತ್ನಿಸಿದ್ದಾರೆ. ಉಡುಪಿ ಅಗ್ನಿಶಾಮಕ ದಳದ ತಂಡ ಆಗಮಿಸಿ ಬೆಂಕಿಯನ್ನು ನಂದಿಸಿದರು.

ಬಳಿಕ ಬೀಸಿದ ಗಾಳಿಗೆ ಮತ್ತೂಮ್ಮೆ ಬೆಂಕಿ ಹತ್ತಿಕೊಂಡು ಇಡೀ ಪರಿಸರಕ್ಕೆ ವ್ಯಾಪಿಸಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕೂಡಾ ಕೈಕೊಟ್ಟಿದ್ದು ಸ್ಥಳೀಯರು, ಶಿರ್ವದ ರಿಕ್ಷಾಚಾಲಕರು ಮತ್ತು ಹಾಸ್ಟೆಲ್‌ನ ವಿದ್ಯಾರ್ಥಿಗಳು ಸೇರಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಉಡುಪಿ ಅಗ್ನಿ ಶಾಮಕ ದಳದ ಅಧಿಕಾರಿ ಕೇಶವ ಅವರ ನೇತೃತ್ವದ ತಂಡ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ.

ಫೈರ್‌ಮ್ಯಾನ್‌ಗಳಾದ ರಾಘವೇಂದ್ರ, ಅಮ‌ರ್ ಕಟ್ಟಿ, ಅರುಣ್, ವಿನಾಯಕ ಕಲ್ಮನೆ, ಚಾಲಕ ಆಲ್ವಿನ್, ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಂಶುಪಾಲ ಡಾ| ಮಿಥುನ್ ಚಕ್ರವರ್ತಿ, ಸ್ಥಳೀಯರಾದ ಜಯಪಾಲ ಶೆಟ್ಟಿ, ಅಶೋಕ್, ಡಾ| ರವಿಶಂಕ‌ರ್, ಕಾಲೇಜಿನ ವಾಚ್‌ಮೆನ್‌ ಮತ್ತಿತರರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar